Site icon Suddi Belthangady

ಶಿಶಿಲ: ಅಡ್ಡಹಳ್ಳ ಫ್ರೆಂಡ್ಸ್ ಸಾರಥ್ಯದಲ್ಲಿ ದೋಸೆ ಹಬ್ಬ-ಬೃಹತ್ ಹಗ್ಗಜಗ್ಗಾಟ-ಮುಂದಿನ ದಿನಗಳಲ್ಲಿ ಶಿಶಿಲ ಪ್ರವಾಸಿಗರ ತಾಣವಾಗಲಿದೆ: ಶಾಸಕ ಹರೀಶ್ ಪೂಂಜ

ಶಿಶಿಲ: ಅ. 19ರಂದು ಶಿಶಿಲ ಅಡ್ಡಹಳ್ಳ ಫ್ರೆಂಡ್ಸ್ ಸಾರಥ್ಯದಲ್ಲಿ ದೋಸೆ ಹಬ್ಬ -ಬೃಹತ್ ಹಗ್ಗಜಗ್ಗಾಟ ಕಾರ್ಯಕ್ರಮ ಶಿಶಿಲದ ಅಡ್ಡಹಳ್ಳದಲ್ಲಿ ನಡೆಯಿತು. ಮುಂಜಾನೆ ದೋಸೆ ಹಬ್ಬಕ್ಕೆ ಶಿಶಿಲೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸೂರಜ್ ನೆಲ್ಲಿತ್ತಾಯ ಚಾಲನೆ ನೀಡಿದರು. ರಾತ್ರಿ 8ಗಂಟೆಗೆ ಅಡ್ಡಹಳ್ಳ ಫ್ರೆಂಡ್ಸ್ ತಂಡದ ಅಧ್ಯಕ್ಷ ಕರುಣಾಕರ ಶಿಶಿಲ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮವನ್ನು ಮುಖ್ಯ ಅತಿಥಿ ಶಾಸಕ ಹರೀಶ್ ಪೂಂಜಾ ಆಗಮಿಸಿ ಉದ್ಘಾಟಿಸಿ ಶುಭ ಕೋರಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ಬರ್ಗುಳ, ಶಿಶಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀನ್ ಡಿ., ಶಿಶಿಲೇಶ್ವರ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ಸುನಿಲ್ ಗೋಖಲೆ, ಶಿಶಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ಅಮ್ಮುಡಂಗೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿಶಿಲ ವಲಯದ ಮೇಲ್ವಿಚಾರಕರಾದ ಗಾಯತ್ರಿ ಮತ್ತು ರಶ್ಮಿತಾ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.

ಶಿಶಿಲ ಗ್ರಾಮ ಮುಂದಿನ ದಿನಗಳಲ್ಲಿ ಪ್ರವಾಸಿಗರ ತಾಣವಾಗಲಿದೆ: ಶಾಸಕ ಹರೀಶ್ ಪೂಂಜ -ದೋಸೆ ಹಬ್ಬ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಹರೀಶ್ ಪೂಂಜಾರ ಬಳಿ ಕಾರ್ಯಕ್ರಮದ ಆಯೋಜಕರಾದ ಕರುಣಾಕರ ಶಿಶಿಲ ಮತ್ತು ಸಂದೀಪ್ ಅಮ್ಮುಡಂಗೆ ಮಾತನಾಡಿ ಇನ್ನೆರಡು ತಿಂಗಳಲ್ಲಿ ಶಿಶಿಲ ಸರಕಾರಿ ಶಾಲೆಯ ನೂತನ ಕೊಠಡಿ ಉದ್ಘಾಟನೆ ನಡೆಯಲಿದ್ದು ಉದ್ಘಾಟನೆಗೆ ಕೇಂದ್ರ ಸಚಿವರನ್ನು ಕರೆತರಬೇಕು ಕೇಂದ್ರ ಸಚಿವರೊಬ್ಬರೂ ಶಿಶಿಲಕ್ಕೆ ಆಗಮಿಸಿದರೆ ಇದು ಮೊದಲ ಬಾರಿಗೆ ಕೇಂದ್ರ ಸಚಿವರೊಬ್ಬರೂ ಆಗಮಿಸಿದಂತೆ ಆಗುತ್ತದೆ. ಈ ಹಿಂದೆ ಇಂದಿರಾ ಗಾಂಧಿ ಭೇಟಿ ನೀಡಿದ್ದರು. ಅಗ ಅವರು ಯಾವುದೇ ಹುದ್ದೆಯಲ್ಲಿರಲಿಲ್ಲ. ಈ ಬಾರಿ ಕೇಂದ್ರ ಸಚಿವರು ಶಿಶಿಲಕ್ಕೆ ಆಗಮಿಸಿದರೆ ಅವರ ಬಳಿ ಶಿಶಿಲದ ಸಮಗ್ರ ಅಭಿವೃದ್ಧಿ ಮತ್ತು ಶಿಶಿಲವನ್ನು ಪ್ರವಾಸಿ ತಾಣವಾಗಿ ಹೇಗೆ ರೂಪುಗೊಳಿಸಬೇಕು ಎಂಬುದರ ರೂಪುರೇಷೆಯನ್ನು ಸಿದ್ದಪಡಿಸಿ ಕೊಡುತ್ತೇವೆ ಎಂದು ಶಾಸಕರ ಬಳಿ ತಿಳಿಸಿದಾಗ ಶಾಸಕರು ಮಾತನಾಡಿ ನಿಮ್ಮ ಈ ಉತ್ತಮ ಆಲೋಚನೆಗೆ ನನ್ನ ಬೆಂಬಲ ನೂರಕ್ಕೆ ನೂರರಷ್ಟು ನೀಡುತ್ತೇನೆ. ಶೋಭಾ ಕರಂದ್ಲಾಜೆ ಅಥವಾ ವಿ. ಸೋಮಣ್ಣ ಇವರಿಬ್ಬರಲ್ಲಿ ಒಬ್ಬ ಸಚಿವರನ್ನು ಖಂಡಿತ ಕರೆದುಕೊಂಡು ಬರುತ್ತೇನೆ. ಅದಲ್ಲದೆ ಶಿಶಿಲ ಗ್ರಾಮ ಪ್ರವಾಸಿ ತಾಣವಾಗುವ ಕನಸು ನಾನು ಕೂಡ ಕಂಡಿದ್ದೇನೆ ಎಂದು ತಿಳಿಸಿದರು.

ಅತಿಥಿಗಳನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ಅಮ್ಮುಡಂಗೆ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಚಂದನ ಕುಮಾರಿ ನಡೆಸಿಕೊಟ್ಟರು. ಹಗ್ಗಜಗ್ಗಾಟದ ನಿರೂಪಣೆಯನ್ನು ಸುರೇಶ್ ಪಡಿಪಂಡ ನೆರವೇರಿಸಿದರು. ಶಿವಾನಂದ ಶಿಶಿಲ ಧನ್ಯವಾದವಿತ್ತರು.

Exit mobile version