Site icon Suddi Belthangady

ವಾಣಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ ಸಮಾರಂಭ

‌‌ಬೆಳ್ತಂಗಡಿ: ಯುವಜನರು ಜೀವನ ಕೌಶಲ್ಯಗಳನ್ನು ಕಲಿತುಕೊಂಡು ಉತ್ತಮ ಬದುಕನ್ನು ನಡೆಸುವುದರೊಂದಿಗೆ ರಾಷ್ಟ್ರ ಸೇವೆಯಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಸುಲ್ಕೇರಿ ಶ್ರೀರಾಮ ಶಾಲೆಯ ಉಪಾಧ್ಯಕ್ಷ ಚಂದ್ರಕಾಂತ ಗೋರೆ ಹೇಳಿದರು. ಅವರು ವಾಣಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಮಾರೋಪ ಭಾಷಣ ಮಾಡುತ್ತಾ, ಆಧುನಿಕ ಸಮಾಜದಲ್ಲಿ ತಂತ್ರಜ್ಞಾನದ ಹೆಚ್ಚಿನ ಬಳಕೆಯಿಂದ ಯುವ ಜನರು ಶ್ರಮ ಸಂಸ್ಕೃತಿಯನ್ನು ಮರೆತು ಎಲ್ಲವನ್ನು ಸುಲಭವಾಗಿ ಗಳಿಸಿಕೊಳ್ಳಲು ಪ್ರಯತ್ನಿಸುವುದು ವಿಪರ್ಯಾಸವಾಗಿದೆ. ಶಿಕ್ಷಣ ಅಂಕಧಾರಿತ ಮಾತ್ರವಾಗಿರದೆ ಜೀವನ ಮೌಲ್ಯಗಳನ್ನು ಗಳಿಸಿಕೊಳ್ಳುವಂತಿರಬೇಕು. ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಯಶಸ್ಸನ್ನು ಗಳಿಸಬಹುದು ಎಂದರು.

ವಾಣಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ನಾರಾಯಣಗೌಡ ದೇವಸ್ಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಧರ್ನಪ್ಪ ಗೌಡ ಬಾನಡ್ಕ, ಕೋಶಾಧಿಕಾರಿ ಯುವರಾಜ್ ಅನಾರ್, ವಾಣಿ ಸೌಹಾರ್ದ ಬ್ಯಾಂಕ್ ನ ನಿರ್ದೇಶಕ ಪುರಂದರ ಗೌಡ ಮುಗೇರಡ್ಕ, ಸುಲ್ಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಿರಿಜಾ, ಉಪಾಧ್ಯಕ್ಷ ಶುಭಕರ ಪೂಜಾರಿ, ಸದಸ್ಯರಾದ ರವಿ ಪೂಜಾರಿ, ಸುಲ್ಕೇರಿ ಶ್ರೀರಾಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ರಾಜು ಪೂಜಾರಿ, ಮುಖ್ಯೋಪಾಧ್ಯಾಯ ಪ್ರಮೋದ್, ನಾರಾವಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸದಾನಂದ ಗೌಡ ಮಜ್ಜೋಡಿ, ನಾರಾವಿ ವಲಯ ಎಸ್.ಕೆ.ಡಿ.ಆರ್.ಡಿ.ಪಿ ಮೇಲ್ವಿಚಾರಕಿ ವಿಶಾಲ ಕೆ. ಉಪಸಿತರಿದ್ದರು.

ಎನ್.ಎಸ್.ಎಸ್ ಸಹಕಾರ್ಯಕ್ರಮಾಧಿಕಾರಿ ಶ್ರಾವ್ಯ ವರದಿ ವಾಚಿಸಿದರು. ಘಟಕ ನಾಯಕ ತೀರ್ಥೇಶ್ ಹಾಗೂ ನಾಯಕಿ ಸುಶ್ಮಿತಾ ಅನಿಸಿಕೆ ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ. ಸ್ವಾಗತಿಸಿದರು. ಉಪನ್ಯಾಸಕ ಮಹಾಬಲ ಗೌಡ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ದಿನೇಶ್ ಗೌಡ ಯು. ಧನ್ಯವಾದವಿತ್ತರು.

Exit mobile version