Site icon Suddi Belthangady

ವಾಣಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಬೆಳ್ತಂಗಡಿ: ವಿದ್ಯಾರ್ಥಿ ದೆಸೆಯಿಂದಲೇ ಸಂಸ್ಕಾರ, ಸಂಸ್ಕೃತಿ ಮತ್ತು ಸೇವಾ ಮನೋಭಾವಗಳನ್ನು ರೂಢಿಸಿಕೊಳ್ಳುವುದರಿಂದ ಉನ್ನತ ವ್ಯಕ್ತಿತ್ವವನ್ನು ಗಳಿಸಿಕೊಳ್ಳಬಹುದು ಎಂದು ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಹೇಳಿದರು.

ಅವರು ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ನಡೆಯಲಿರುವ ವಾಣಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, ನಮ್ಮ ಸಮಾಜ ಮತ್ತು ಪರಿಸರದ ಜನಜೀವನವನ್ನು ಅರಿತುಕೊಳ್ಳಬೇಕು. ದೇಶಕ್ಕಾಗಿ ತುಡಿಯುವ ಮನಸ್ಸು ಜಾಗೃತಗೊಳ್ಳಬೇಕು. ಎನ್. ಎಸ್. ಎಸ್ ನಂತಹ ಕಾರ್ಯ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಮಾನಸಿಕ ಮತ್ತು ಬೌದ್ಧಿಕ ಶಿಕ್ಷಣವನ್ನು ನೀಡುವುದರೊಂದಿಗೆ ಜೀವನಕ್ಕೆ ದಾರಿದೀಪವಾಗಿದೆ ಎಂದರು.

ಸುಲ್ಕೇರಿ ಶ್ರೀರಾಮ ಶಾಲೆಯ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಗಣೇಶ್ ಹೆಗ್ಡೆ, ಅಧ್ಯಕ್ಷ ರಾಜು ಪೂಜಾರಿ, ಕಾರ್ಯದರ್ಶಿ ಶಶಿಧರ ಶೆಟ್ಟಿ, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ, ವಾಣಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗಣೇಶ ಗೌಡ, ಆಡಳಿತ ಅಧಿಕಾರಿ ಪ್ರಸಾದ್ ಕುಮಾರ್, ಸುಲ್ಕೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ವಿದ್ಯಾ ಗೋರೆ, ಸುಲ್ಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಬೊಳ್ಳಿಮಾರು, ಸುಲ್ಕೇರಿ ಗ್ರಾಮ ಪಂಚಾಯತ್ ಸದಸ್ಯ ನಾರಾಯಣ ಪೂಜಾರಿ, ಅಳದಂಗಡಿ ಪ್ರಾ.ಕೃ.ಪ.ಸ ಸಂಘದ ನಿರ್ದೇಶಕ ಸದಾನಂದ ಗೌಡ, ಸುಲ್ಕೇರಿ ಶ್ರೀ ರಾಮ ಶಾಲೆಯ ಮುಖ್ಯೋಪಾಧ್ಯಾಯ ಪ್ರಮೋದ್, ಎನ್ಎಸ್ಎಸ್ ಸಹಕಾರ್ಯಕ್ರಮಾಧಿಕಾರಿ ಶ್ರಾವ್ಯ, ಘಟಕ ನಾಯಕರು ತೀರ್ಥೇಶ್, ಸುಶ್ಮಿತಾ ಉಪಸ್ಥಿತರಿದ್ದರು.
ವಾಣಿ ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ. ಸ್ವಾಗತಿಸಿದರು. ಉಪನ್ಯಾಸಕಿ ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ದಿನೇಶ್ ಗೌಡ ಧನ್ಯವಾದವಿತ್ತರು.

Exit mobile version