ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ವಿರೋಧಿಸಿ ಸೆ.29ರಂದು ಬೆಳ್ತಂಗಡಿ ತಾಲೂಕು ಕಚೇರಿಯೆದುರು ಪ್ರತಿಭಟನೆಗೆ ಕೇಳಲಾದ ಅನುಮತಿ ಪತ್ರವನ್ನು ತಿರಸ್ಕರಿಸಿ, ಪ್ರತಿಭಟನೆಗೆ ಅವಕಾಶವಿಲ್ಲವೆಂದು ಬೆಳ್ತಂಗಡಿ ತಹಶೀಲ್ದಾರ್ ತಿಳಿಸಿದ್ದಾರೆ.
ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಕಛೇರಿ ಅವರಣದಲ್ಲಿ ಪ್ರತಿಭಟನೆಗೆ ಪ್ಲಾನ್ ಮಾಡಲಾಗಿತ್ತು.ಅನುಮತಿ ಕೋರಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್ ಅಂತರ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದ್ದರು.
ಈ ಬಗ್ಗೆ ಬೆಳ್ತಂಗಡಿ ಠಾಣಾಧಿಕಾರಿಗೆ ಈ ಬಗ್ಗೆ ಪರಿಶೀಲಿಸಿ ಕಾನೂನಿನೊಳಗೆ ಅವಕಾಶವಿದ್ದಲ್ಲಿ ಅಭಿಪ್ರಾಯ ನೀಡಬೇಕಾಗಿ ಕೋರಲಾಗಿತ್ತು. ಸಾರ್ವಜನಿಕ ಶಾಂತಿಗೆ ಭಂಗವನ್ನುಂಟು ಮಾಡಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವದ ವರದಿ ಬಂದಿದ್ದರಿಂದ, ಅನುಮತಿ ನೀಡದಂತೆ ಪೊಲೀಸ್ ಇಲಾಖೆಯಿಂದ ತಹಶಿಲ್ದಾರ್ ಗೆ ಅಭಿಪ್ರಾಯ ಬಂದಿದ್ದು, ಹಾಗಾಗಿ ಪ್ರತಿಭಟನೆ ಮಾಡಲು ಅವಕಾಶವಿರುವುದಿಲ್ಲ ಎಂದು ತಹಶೀಲ್ದಾರ್ ಅನುಮತಿ ನಿರಾಕರಿಸಿದ್ದಾರೆ ಎನ್ನಲಾಗಿದೆ.