Site icon Suddi Belthangady

ನಿಡ್ಲೆ: ಸರ್ಕಾರಿ ಪ್ರೌಢಶಾಲೆಯ ನೂತನ ಶಾಲಾ ಕೊಠಡಿಗೆ ಶಿಲಾನ್ಯಾಸ

ನಿಡ್ಲೆ: ಮಂಗಳೂರಿನ ಎಂ.ಸಿ.ಎಫ್.ಎಲ್ ವತಿಯಿಂದ ಒದಗಿಸುವ ಎರಡು ಕೊಠಡಿಗಳೂ ಸೇರಿದಂತೆ ನಿಡ್ಲೆ ಸರ್ಕಾರಿ ಪ್ರೌಢಶಾಲೆ ಹಳೆ ವಿದ್ಯಾರ್ಥಿಗಳ ಸೇವಾ ಟ್ರಸ್ಟ್ ಮೂಲಕ ನಿರ್ಮಾಣಗೊಳ್ಳುವ ನಿಡ್ಲೆ ಸರ್ಕಾರಿ ಪ್ರೌಢಶಾಲೆಯ ನೂತನ ಶಾಲಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಸೆ. 26ರಂದು ನೆರವೇರಿತು.

ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಅವರು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ಯಾಮಲಾ ವಹಿಸಿದ್ದರು.

ಊರ ಹಿರಿಯರಾದ ಸತ್ಯನಾರಾಯಣರಾವ್ ಪೈರೋಡಿ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಟ್ರಸ್ಟ್ ನ ಅಧ್ಯಕ್ಷ ರಾಜ ಗುರು ಹೆಬ್ಬಾರ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಎಂ.ಸಿ.ಎಫ್. ನ ಅಸಿಸ್ಟೆಂಟ್ ಮ್ಯಾನೇಜರ್ ರಾಕೇಶ್, ಹಿರಿಯ ಅಧಿಕಾರಿ ವಿವೇಕ್ ಕೋಟ್ಯಾನ್, ಸುವರ್ಣ ಕನ್ಸ್ಟ್ರಕ್ಷನ್ ನ ಸದಾಶಿವ ಸುವರ್ಣ, ವೇಣೂರು ಪ್ರೌಢಶಾಲೆಯ ಉಪ ಪ್ರಾಂಶುಪಾಲ ವೆಂಕಟೇಶ್ ತುಳುಪುಳೆ, ಎಸ್.ಡಿ.ಎಂ.ಸಿ ಅಧ್ಯಕ್ಷ ನೂಜಿಲ ಲಕ್ಷ್ಮಣಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಕುಮಾರ್ ಹೆಬ್ಬಾರ್, ಮೋಹನ್, ದೀಪಕ್ ಸುವರ್ಣ, ಇಂಜಿನಿಯರ್ ಸಿಜೋ ಜೋಸೆಫ್ ಉಪಸ್ಥಿತರಿದ್ದರು.

ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು,ಹಿರಿಯ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಊರಿನ ವಿದ್ಯಾ ಅಭಿಮಾನಿಗಳು ಶಿಲನ್ಯಾಸ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಬೂಡುಜಾಲಿನ ಸಮೂಹ ಬಳಗದವರು ಇದೇ ಸಂದರ್ಭದಲ್ಲಿ ಟ್ರಸ್ಟ್ ಗೆ ರೂ.10000/- ಮತ್ತು ಸುವರ್ಣ ಕನ್ಸ್ಟ್ರಕ್ಷನ್ ಮಾಲೀಕ ಸದಾಶಿವ ಸುವರ್ಣ ಅವರು ರೂಪಾಯಿ 25,000/- ದೇಣಿಗೆ ನೀಡಿ ಶಾಲಾ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಮುಖ್ಯ ಶಿಕ್ಷಕಿ ಶಾಂತಾ ಶೆಟ್ಟಿ ಸ್ವಾಗತಿಸಿ, ಶರತ್ ಕುಮಾರ್ ತುಳುಪುಳೆ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಪ್ರಸಾದ್ ವಂದಿಸಿದರು.

Exit mobile version