Site icon Suddi Belthangady

ಕಲಿಯುಗದಲ್ಲಿ ಭಗವಂತನನ್ನು ಒಲಿಸಿಕೊಳ್ಳಲು ಇರುವ ಏಕೈಕ ಮಾರ್ಗವೇ ‘ಭಜನೆ’: ಸಹನಾ ಕುಂದ‌ರ್

ಧರ್ಮಸ್ಥಳ: ಮಾನವರನ್ನು ಮೆಚ್ಚಿಸುವುದಕ್ಕಿಂತ ಭಗವಂತನನ್ನು ಮೆಚ್ಚಿಸುವುದು ಮುಖ್ಯ ಎಂದು ಉಡುಪಿಯ ಸೂಡ ಮೂಲದ ವಕೀಲೆ ಸಹನಾ ಕುಂದರ್ ಅಭಿಪ್ರಾಯಪಟ್ಟರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ 2025ನೇ ಸಾಲಿನ ಸೆ. 14ರಿಂದ 21ರವರೆಗೆ ನಡೆಯಲಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ 6ನೇ ದಿನದ ಕಾರ್ಯಾಗಾರದಲ್ಲಿ ‘ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ಭಜನೆಯ ಪಾತ್ರ’ ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು.

ಸಾಮಾಜಿಕ ಸಾಮರಸ್ಯ ಮೂಡಿಸುವುದಕ್ಕೆ ಬಹಳ ಮುಖ್ಯ ಮೂಲವೇ ಭಜನೆ ಆಡಂಬರವಿಲ್ಲದ ಭಗವಂತ ಮಂಜುನಾಥ ಪ್ರತಿಯೊಬ್ಬರ ಪ್ರಾರ್ಥನೆಗೂ ಒಲಿಯುತ್ತಾನೆ ಹಾಗಾಗಿ ಉತ್ತಮ ಮನಸ್ಸಿಂದ ಬೇಡಿಕೊಳ್ಳುವುದು ಮುಖ್ಯ ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಸಜ್ಜನರು ಮತ್ತು ಭಗವಂತನೂ ಒಲಿಯುತ್ತಾನೆ ಎಂದು ಹೇಳಿದರು.

ಮಾನವರು ಜೀವನದಲ್ಲಿ ಎಡವುದು ಸಹಜ ಆದರೆ ಮತ್ತೆ ಅದೇ ಸ್ಥಳದಲ್ಲಿ ಎದ್ದು ನಿಂತು ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳುವುದು ಉತ್ತಮ ಇಂದಿನ ಪೀಳಿಗೆಗೆ ಆಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣ ಅತ್ಯಗತ್ಯ. ಅದನ್ನು ಪರಿಪೂರ್ಣಗೊಳಿಸುವ ಹೊಣೆಗಾರಿಕೆ ಪೋಷಕರದು ಹಾಗಾಗಿ ಭಜಕರು ಕಮ್ಮಟಗಳಲ್ಲಿ ದೊರೆತ ವಿಚಾರಧಾರೆಗಳನ್ನು ಮಕ್ಕಳಿಗೆ ನೀಡಬೇಕಿದೆ. ಬದುಕು ಬದಲಾಯಿಸಬಲ್ಲ ಧೀಮಂತ ಶಕ್ತಿಯಾದ ಭಜನೆಯ ಆಸಕ್ತಿಯನ್ನು ಯುವ ಮನಸ್ಸುಗಳಲ್ಲಿ ಬಿತ್ತಬೇಕಿದೆ ಎಂದು ಅಭಿಪ್ರಾಯಪಟ್ಟರು.

ಭಜನೆ ಎಂಬುದು ನಿತ್ಯ ನಿರಂತರ, ನೂತನವಾಗಬೇಕು. ಇಂದು ವಿದ್ಯಾವಂತ ಮತ್ತು ವಿಚಾರವಂತರಾದ ನಾವು ಆಚಾರವಂತರಾಗಬೇಕಿದೆ. ಅದಕ್ಕಾಗಿ ದೇಶ ನಮಗೇನು ನೀಡಿದೆ ಎನ್ನುವುದಕ್ಕಿಂತ ನಾವು ದೇಶಕ್ಕೇನು ನೀಡಿದ್ದೇವೆ ಎಂಬುದು ಮುಖ್ಯ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಉಪಾಧ್ಯಕ್ಷ ಡಿ.ಹರ್ಷೇಂದ್ರ ಕುಮಾರ್ ಹೇಳಿದರು.

ಕಾರ್ಯಕ್ರಮದಲ್ಲಿ ಮನೆ ಮನಗಳಿಗೆ ಸಂಸ್ಕಾರ ನೀಡುವ ಸಾಧನ ಮತ್ತು ವೇದ ಪುರಾಣ ಹಾಗೂ ಉಪನಿಷತ್ತುಗಳ ಸಾರವೇ ಭಜನೆ ಎಂದು ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತಸರ ಶರತ್ ಕೃಷ್ಣ ಪಡೆಟ್ನಾಯ ಗೌರವ ಉಪಸ್ಥಿತಿ ವಹಿಸಿ ಮಾತನಾಡಿದರು. ಶ್ರೀಧಾಮ, ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದಿವ್ಯಸಾನಿಧ್ಯ ವಹಿಸಿದ್ದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವಿ. ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಬನ್ನೂರು, ಪದ್ದರಾಜ್ ಜೈನ್, ಕೋಶಾಧಿಕಾರಿ, ಭಜನಾ ಕಮ್ಮಟ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ., ಅಳಿಯೂರು ಹಾಗೂ ರವೀಂದ್ರ ಇವರು ಕರ್ತವ್ಯ ನಿರ್ವಹಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾಥಮಿಕ ಶಾಲೆಯ ಅಧ್ಯಾಪಕ ನಿಶಾಂತ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version