Site icon Suddi Belthangady

ಶಿಬರಾಜೆ: ಜೆಸಿಐ ಕೊಕ್ಕಡ ಕಪಿಲಾ ಘಟಕದಿಂದ ‘ಜೆಸಿ ಸಪ್ತಾಹ 2025’ಕ್ಕೆ ಭವ್ಯ ಚಾಲನೆ

ಶಿಬರಾಜೆ: ಸೆ.9ರಂದು ಜೆಸಿಐ ಕೊಕ್ಕಡ ಕಪಿಲಾ ಘಟಕದಿಂದ ಆಯೋಜಿಸಲಾದ ‘ಜೆಸಿ ಸಪ್ತಾಹ 2025’ಕ್ಕೆ ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಸಭಾಂಗಣದಲ್ಲಿ ಅದ್ದೂರಿ ಚಾಲನೆ ದೊರೆಯಿತು. ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಗೌಡ ಕಾರ್ಯಕ್ರಮ ಉದ್ಘಾಟಿಸಿದರು.

ಎರಡನೇ ದಿನ: ಕಾಯರ್ತಡ್ಕದ ದಿವ್ಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಮನಸ್ಸನ್ನು ಗೆದ್ದವನೇ ಪರೀಕ್ಷೆ ಗೆಲ್ಲುತ್ತಾನೆ” ಎಂಬ ವಿಷಯದಡಿ ಜೀವನ ಕೌಶಲ್ಯ ಮತ್ತು ಸಾಮರ್ಥ್ಯ ವೃದ್ಧಿ ತರಬೇತಿಯನ್ನು ಎಸ್.ಆರ್. ಲಿಸ್ನಾ ಮ್ಯಾತ್ಯು ಹಾಗೂ ಜೆ.ಎಫ್.ಡಿ ಶಂಕರ್ ರಾವ್ ನೀಡಿದರು. ನಂತರ ಸೌತೆಡ್ಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಎಸ್‌.ಡಿ.ಎಂ.ಸಿ ಉಪ ಅಧ್ಯಕ್ಷ ದೀಪ ಹಾಗೂ ಮುಖ್ಯ ಶಿಕ್ಷಕಿ ಜ್ಯೋತಿ ಹೆಬ್ಬಾರ್ ಭಾಗವಹಿಸಿದ್ದರು.

ಮೂರನೇ ದಿನ: ಕೊಕ್ಕಡದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಚೆಸ್ ಮತ್ತು ಕ್ಯಾರಂ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆ ಬಳಿಕ ಆರೋಗ್ಯ ತಪಾಸಣೆ ಶಿಬಿರದಲ್ಲಿ ರಕ್ತದೊತ್ತಡ ಹಾಗೂ ಮಧುಮೇಹ ಪರೀಕ್ಷೆ ನಡೆಯಿತು. ಕೊಕ್ಕಡ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಸ್ವಚ್ಛ ಸಂಕೀರ್ಣಕ್ಕೆ ಭೇಟಿ ನೀಡಿ ಸ್ವಚ್ಛತಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲಾಯಿತು.

ನಾಲ್ಕನೇ ದಿನ: ಶಿಬರಾಜೆ ಗ್ರಾಮಾಭ್ಯುದಯ ಸಭಾಂಗಣದಲ್ಲಿ “ವ್ಯವಹಾರ ದಿನ”ದ ಅಂಗವಾಗಿ ನಾಮಫಲಕ ಅನಾವರಣ ಮತ್ತು ವ್ಯಾಪಾರ ತರಬೇತಿ ನಡೆಯಿತು.

ಐದನೇ ದಿನ: ಎಂಡೋಸಲ್ಫಾನ್ ಕೇಂದ್ರದಲ್ಲಿ ಹಣ್ಣು ಹಂಪಲು ವಿತರಣೆ ನಡೆಯಿತು. ನಂತರ ಕೊಕ್ಕಡ ಪ್ರೌಢ ಶಾಲೆಯಲ್ಲಿ ಮಕ್ಕಳಿಗಾಗಿ ಪೋಸ್ಟರ್ ಪ್ರೆಸೆಂಟೇಷನ್ ಸ್ಪರ್ಧೆ ನಡೆಯಿತು.

ಆರನೇ ದಿನ: ಜೆಸಿ ಸೇರ್ಪಡೆ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಏಳನೇ ದಿನ: ಕುಟುಂಬೊತ್ಸವ ಕಾರ್ಯಕ್ರಮ ಸಮ್ಯಕ್ ಕಾಂಪ್ಲೆಕ್ಸ್‌ನ ಎಜುನೆಕ್ಸ್ಟ್ ಅಕಾಡೆಮಿಯಲ್ಲಿ ಜೆಸಿಗಳಿಗಾಗಿ ವಿವಿಧ ಸ್ಪರ್ಧೆಗಳು ನಡೆಯಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಜೆಸಿ ವಲಯ ಸಂಯೋಜಕ ಜಿತೇಶ್ ಪಿರೇರಾ ಪ್ರಾಸ್ತಾವಿಕ ಭಾಷಣ ಮಾಡಿದರು. ನಿವೃತ್ತ ಶಿಕ್ಷಕಿ ಜೆಸಿ ಮನೋರಮ್ಮ ಅವರಿಗೆ ‘ಕಪಿಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷೆ ಡಾ. ಶೋಭಾ ಪಿ. ಅತಿಥಿಗಳನ್ನು ಸ್ವಾಗತಿಸಿ, ಯೋಜನಾ ನಿರ್ದೇಶಕ ಜಸ್ವಂತ್ ಪಿರೇರ ‘ಜೆಸಿ ಸಪ್ತಾಹ’ ವರದಿ ಮಂಡಿಸಿದರು. ವೇದಿಕೆಯಲ್ಲಿ ಜೆಸಿ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಜೈನ್, ಜೆಜೆಸಿ ಅಧ್ಯಕ್ಷ ಶ್ರವಣ್, ಜೆಸಿಎಲ್‌ಟಿ ದಕ್ಷ ಜೈನ್ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು. ಜೆಸಿ ವಾಣಿಯನ್ನು ಪ್ರಿಯಾ ಜೆ ಅಮೀನ್ ವಾಚಿಸಿ, ಕಾರ್ಯದರ್ಶಿ ಚಂದನಾ ಪಿ. ಧನ್ಯವಾದ ಅರ್ಪಿಸಿದರು.

Exit mobile version