ಉಜಿರೆ: ನಿರುದ್ಯೋಗ ಸಮಸ್ಯೆ ನಿವಾರಣೆಯೊಂದಿಗೆ ದೇಶದ ಪ್ರಗತಿಯಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ ಸೇವೆ ಮತ್ತು ಸಾಧನೆ ಶ್ಲಾಘನೀಯವಾಗಿದೆ ಎಂದು ಕೆನರಾ ಬ್ಯಾಂಕ್ನ ಮಹಾಪ್ರಬಂಧಕ ಎಂ. ಭಾಸ್ಕರ ಚಕ್ರವರ್ತಿ ಹೇಳಿದರು. ಅವರು ಸೆ.12ರಂದು ಧರ್ಮಸ್ಥಳದಲ್ಲಿ ಶ್ರೀಸನ್ನಿಧಿ ಅತಿಥಿಗೃಹದಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ (ರುಡ್ಸೆಟ್ ಸಂಸ್ಥೆಗಳ) ನಿರ್ದೇಶಕರ ವಾರ್ಷಿಕ ಸಮ್ಮೇಳನದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಪ್ರಾಯೋಗಿಕವಾಗಿ ಉಜಿರೆಯಲ್ಲಿ ಆರಂಭಿಸಿದ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆ ಮಾದರಿಯಾಗಿದ್ದು ಕೇಂದ್ರಸರ್ಕಾರವೂ ಇದಕ್ಕೆ ಮಾನ್ಯತೆ ನೀಡಿದ್ದು, ದೇಶದೆಲ್ಲೆಡೆ ಇಂದು 670 ಸಂಸ್ಥೆಗಳು ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ತರಬೇತಿ ನೀಡುತ್ತಿದ್ದು ದೇಶದ ಆರ್ಥಿಕ ಪ್ರಗತಿಯಲ್ಲಿ ಇವುಗಳ ತ್ಯಾಗ, ಸೇವೆ ಮತ್ತು ಸಾಧನೆ ಅಮೂಲ್ಯವಾಗಿದೆ ಎಂದು ಶ್ಲಾಘಿಸಿ ಅಭಿನಂದಿಸಿದರು.
ಕೌಶಲಾಭಿವೃದ್ಧಿ ಇಂದು ಅಗತ್ಯವಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಗೃಹನಿರ್ಮಾಣ ಕಾರ್ಮಿಕರು ಹಾಗೂ ಇತರ ಕುಶಲಕರ್ಮಿಗಳ ಬೇಡಿಕೆ ಹೆಚ್ಚಾಗುತ್ತಿದ್ದು ಕೌಶಲಾಭಿವೃದ್ಧಿ ತರಬೇತಿಗೆ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಎಲ್ಲಾ ನಿರ್ದೇಶಕರು ಪ್ರತಿದಿನ ರುಡ್ಸೆಟ್ ಸಂಸ್ಥೆಗಳ ಸ್ವಚ್ಛತೆ ಮತ್ತು ನಿರ್ವಹಣೆ ಬಗ್ಯೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
ರುಡ್ಸೆಟ್ ಸಂಸ್ಥೆಯ ರಾಷ್ಟೀಯ ನಿಯಂತ್ರಕ ಬೆಂಗಳೂರಿನ ಆರ್.ಆರ್. ಸಿಂಗ್ ಮಾತನಾಡಿ ತರಬೇತಿ ನೀಡುವಾಗ ನಿರುದ್ಯೋಗಿಗಳಲ್ಲಿ ನಾಯಕತ್ವ ಗುಣವನ್ನೂ ಬೆಳೆಸಬೇಕು ಎಂದು ಹೇಳಿದರು.
ರುಡ್ಸೆಟ್ ಸಂಸ್ಥೆಯ ಮಹಾನಿರ್ದೇಶಕ ರಾಜು ಎನ್. ಕೋರಿ ಮಾತನಾಡಿ ಗ್ರಾಮೀಣ ಪ್ರದೇಶದ ಬೇಡಿಕೆಗೆ ಅನುಗುಣವಾಗಿ ಹೊಸತನದ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು.
ಉನ್ನತ ಸಾಧನೆ ಮಾಡಿದ ರುಡ್ಸೆಟ್ ಸಂಸ್ಥೆಗಳನ್ನು ಗೌರವಿಸಲಾಯಿತು.
ಆರ್ಥಿಕ ಆದಾಯ: ರುಡ್ಸೆಟ್ ಸಂಸ್ಥೆ, ಒನ್ಗೋಲ್ (ಪ್ರಥಮ), ರುಡ್ಸೆಟ್ ಸಂಸ್ಥೆ, ಧಾರವಾಡ (ದ್ವಿತೀಯ).
ವಾರ್ಷಿಕ ಕಾರ್ಯಯೋಜನೆ: ರುಡ್ಸೆಟ್ ಸಂಸ್ಥೆ, ವಿಜಯಪುರ (ಪ್ರಥಮ), ರುಡ್ಸೆಟ್ ಸಂಸ್ಥೆ, ಹಾಜಿಪುರ (ದ್ವಿತೀಯ).
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಉತ್ತಮ ಸೇವೆ, ಸಾಧನೆಗೆ ಎಲ್ಲಾ ನೌಕರರನ್ನು ಅಭಿನಂದಿಸಿದರು.
ಸಂಸ್ಥೆಗಳ ಪ್ರಗತಿ, ಸಾಧನೆ ಗುರುತಿಸಿ ಹೊಸ ಯೋಜನೆಗಳನ್ನು ರೂಪಿಸುವುದೇ ವಾರ್ಷಿಕ ಸಮ್ಮೇಳನದ ಉದ್ದೇಶವಾಗಿದೆ ಎಂದರು. ಬ್ಯೂಟಿ ಪಾರ್ಲರ್, ಹೊಲಿಗೆ ಮೊದಲಾದ ವೃತ್ತಿಗಳನ್ನು ಮನೆಯಲ್ಲೆ ಮಾಡಬಹುದು ಎಂದು ಅವರು ಸಲಹೆ ನೀಡಿದರು. ನಿರ್ದೇಶಕರು ಮತ್ತು ಸಿಬ್ಬಂದಿ ಉತ್ತಮ ಗುಣಮಟ್ಟದ ತರಬೇತಿಗೆ ವೈಯಕ್ತಿಕ ಗಮನ ಹರಿಸಬೇಕೆಂದು ಹೇಳಿ ಎಲ್ಲರಿಗೂ ಶುಭ ಹಾರೈಸಿದರು.
ರುಡ್ಸೆಟ್ ಸಂಸ್ಥೆಗಳ ಕೇಂದ್ರೀಯ ಕಾರ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ಸ್ವಾಗತಿಸಿದರು.ಹಿರಿಯ ಉಪನ್ಯಾಸಕಿ ಅನಸೂಯ ಕಾರ್ಯಕ್ರಮ ನಿರ್ವಹಿಸಿದರು. ಉಜಿರೆ ಸಂಸ್ಥೆಯ ನಿರ್ದೇಶಕ ಅಜೇಯ ಧನ್ಯವಾದವಿತ್ತರು.