Site icon Suddi Belthangady

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಯೋಜಕತ್ವದಲ್ಲಿ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಸೆ. 10ರಂದು ಸೇಕ್ರೆಡ್ ಹಾರ್ಟ್ ಕಾಲೇಜಿನ ಒಳ ಕ್ರೀಡಾಂಗಣದಲ್ಲಿ ನಡೆಯಿತು.

ಈ ಪಂದ್ಯಾಟವನ್ನು ಪ್ರಾರ್ಥನಾ ಗೀತೆಯನ್ನು ಹಾಡಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಈ ಪಂದ್ಯಾಟದ ಅಧ್ಯಕ್ಷ ಸ್ಥಾನವನ್ನು ಶಾಲಾ ಸಂಚಾಲಕ ಡಾ. ಸ್ಟ್ಯಾನಿ ಗೋವಿಯಸ್ ಅವರು ವಹಿಸಿದ್ದರು. ಅವರು ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿ ಸೋಲು ಗೆಲುವು ಎಂಬುದು ಕ್ರೀಡೆಯಲ್ಲಿ ಸಾಮಾನ್ಯ ಅದನ್ನು ನಾವು ಸಮಾನತೆಯಿಂದ ಸ್ವೀಕರಿಸಬೇಕು ಎಂದು ಹೇಳಿ ಕ್ರೀಡಾಪಟುಗಳಿಗೆ ಶುಭ ಕೋರಿದರು. ಈ ಪಂದ್ಯಾಟಕ್ಕೆ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಭುವನೇಶ್ ಅವರು ಆಗಮಿಸಿ, ನಮಗೆ ಸಿಗುವಂತ ಅವಕಾಶವನ್ನು ನಾವು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿ ಕ್ರೀಡಾಪಟುಗಳಿಗೆ ಶುಭ ಕೋರಿದರು.

ಈ ಪಂದ್ಯಾಟಕ್ಕೆ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾ ಕೇಸರಿ ಅವರು ಆಗಮಿಸಿ, ಸತತ ಪ್ರಯತ್ನದ ಮೂಲಕ ಜೀವನದಲ್ಲಿ ಯಶಸ್ಸು ಖಂಡಿತ ಎಂಬುದನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು. ಮಡಂತ್ಯಾರು ಗ್ರಾಮ ಪಂಚಾಯತಿನ ಅಧ್ಯಕ್ಷೆ ರೂಪಾ ನವೀನ್ ಅವರು ಆಗಮಿಸಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಲು ಕ್ರೀಡೆ ಅಗತ್ಯ ಎಂಬುದನ್ನು ತಿಳಿಸಿದರು.

ಈ ಪಂದ್ಯಾಟದಲ್ಲಿ ಮಡಂತ್ಯಾರು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಮೊರಾಸ್, ಬೆಳ್ತಂಗಡಿ ದೈಹಿಕ ಶಿಕ್ಷಣ ಪರಿವೀಕ್ಷಣ ಅಧಿಕಾರಿ ಸುಜಯ, ಶಿಕ್ಷಣ ಸಂಯೋಜಕಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಚೇತನಾಕ್ಷಿ, ಪುಂಜಾಲಕಟ್ಟೆ ವಲಯ ಸಂಪನ್ಮೂಲ ವ್ಯಕ್ತಿ ಚೇತನ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ಸ್ವಾ. ದೀಪಕ್ ಲಿಯೋ ಡೇಸ, ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ರವೀಂದ್ರ ರೈ, ಬೆಳ್ತಂಗಡಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಜ್ ಜೈನ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಗ್ರೇಡ್ I ಅಧ್ಯಕ್ಷ ಪಿ. ಸುಭಾಷ್ ಪೂಜಾರಿ, ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಮುಖ್ಯಸ್ಥರು, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಶಾಲಾ ದೈಹಿಕ ಶಿಕ್ಷಕ ವಲೇರಿಯನ್ ಡಿಸೋಜರವರು ಸ್ವಾಗತಿಸಿದರು. ಸಹ ಶಿಕ್ಷಕಿ ರಮ್ಯಾ ಅವರು ನಿರೂಪಿಸಿ, ಸಹ ಶಿಕ್ಷಕಿ ಸೌಮ್ಯ ಎಂ. ಅವರು ಧನ್ಯವಾದ ಸಮರ್ಪಿಸಿದರು.

Exit mobile version