ಬೆಳಾಲು: ಗ್ರಾಮ ಪಂಚಾಯತ್ ನಲ್ಲಿ ಸೆ. 8ರಂದು ಸ್ತ್ರೀಶಕ್ತಿ ಗೊಂಚಲಿನ ಸರ್ವ ಸದಸ್ಯರ ಸಭೆ ಗೊಂಚಲಿನ ಅಧ್ಯಕ್ಷೆ ಆಶಾ ಭಟ್ ಅವರ ಉಪಸ್ಥಿತಿಯಲ್ಲಿ ನಡೆಸಲಾಯಿತು. ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ, ಗೊಂಚಲಿನ ಕಾರ್ಯದರ್ಶಿ ಹರಿಣಾಕ್ಷಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಾರದಾ, ಗೊಂಚಲಿನ ಕೋಶಾಧಿಕಾರಿ ವಸಂತಿ ಉಪಸ್ಥಿತರಿದ್ದರು.
ನಾಡ ಗೀತೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಆಶಾ ಸ್ವಾಗತಿಸಿದರು. ಲತಾ ಕಾರ್ಯಕ್ರಮವನ್ನು ನಿರೂಪಿಸಿ ವಾರ್ಷಿಕ ವರದಿಯನ್ನು ಮಂಡಿಸಿದರು. ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಮಾತನಾಡಿ ನಾವೆಲ್ಲ ಸಮವಸ್ತ್ರ ಧರಿಸಿ ಒಟ್ಟಿಗೆ ಇದ್ದಾಗ ನಾವೆಲ್ಲ ಒಂದೇ ಎಂಬ ಭಾವನೆ ಬರುತ್ತದೆ. ಎಲ್ಲರೂ ಒಗ್ಗಟ್ಟಾಗಿರಲು ಸಾಧ್ಯ, ನಮಗೆ ತಿಳಿದಿರುವುದನ್ನು ಇನ್ನೊಬ್ಬರಿಗೆ ತಿಳಿಸಿ ಅವರನ್ನು ಮೇಲೆ ತರಬೇಕು ಎಂದು ಹಿತನುಡಿದರು. ನಂತರ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕಮಲ, ಉಪಾಧ್ಯಕ್ಷರಾಗಿ ಭಾರತಿ, ಕಾರ್ಯದರ್ಶಿಯಾಗಿ ಲಲಿತ, ಜೊತೆ ಕಾರ್ಯದರ್ಶಿಯಾಗಿ ಸುಮತಿ, ಕೋಶಾಧಿಕಾರಿಯಾಗಿ ಚಿತ್ರ ಅವರನ್ನು ಆಯ್ಕೆ ಮಾಡಿ ನಿರ್ಣಯ ಪುಸ್ತಕ ನೀಡುವುದರ ಮೂಲಕ ಅಧಿಕಾರ ಹತ್ತಾಂತರಿಸಲಾಯಿತು.
ಲತಾ ಅವರು ಕಪಿಲ ವಿವಿಧೋದ್ದೇಶ ಸಹಕಾರ ಸಂಘದಿಂದ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ತಿಳಿಸಿದರು. ಗೊಂಚಲಿನ ಅಧ್ಯಕ್ಷೆ ಆಶಾ ಅವರು ಇದುವರೆಗೆ ಉತ್ತಮ ರೀತಿಯಲ್ಲಿ ನಮಗೆ ಸಹಕಾರ ನೀಡಿದ್ದೀರಿ ಇನ್ನು ಮುಂದೆಯೂ ಎಲ್ಲರೂ ಒಗ್ಗಟ್ಟಾಗಿ ಸೇರಿ ನೂತನ ಪದಾಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಪ್ರೋತ್ಸಾಹಿಸೋಣ ಎಂದು ತಿಳಿಸಿದರು. ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಾರದಾ, ಅಂಗನವಾಡಿ ಕಾರ್ಯಕರ್ತೆಯರು, ಸಂಘದ ಸದಸ್ಯರು ಸಮವಸ್ತ್ರ ಧರಿಸಿ ಒಟ್ಟು 120 ಜನ ಸದಸ್ಯರು ಒಟ್ಟು ಸೇರಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಭಾರತಿ ವಂದಿಸಿದರು.