ಉಜಿರೆ: 800 ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳ ಚರ್ತುವಿಧ ದಾನ ಪರಂಪರೆಯೊಂದಿಗೆ ವಿಶ್ವವಿಖ್ಯಾತವಾಗಿದೆ. ಕ್ಷುಲ್ಲಕ ಕಾರಣದಿಂದ, ಮಾಧ್ಯಮಗಳಲ್ಲಿ ಅಪಪ್ರಚಾರದಿಂದ ಎಲ್ಲರಿಗೂ ತೀವ್ರ ದುಃಖ ವಾಗಿದೆ.
ಧರ್ಮಸ್ಥಳದ ಭವ್ಯ ಪರಂಪರೆ ಹಾಗೂ ಹೆಗ್ಗಡೆಯವರ ಬಹುಮುಖಿ ಸಮಾಜಸೇವಾ ಕಾರ್ಯಗಳನ್ನು ಬೆಂಬಲಿಸಿ ಸಕ್ರಿಯ ಸಹಕಾರ ನೀಡುವುದು ಸಮಗ್ರ ಜೈನಸಮಾಜದ ಕರ್ತವ್ಯವಾಗಿದೆ ಎಂದು ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಅವರು ಕಾರ್ಕಳ ಸೀಮೆಯ ಜೈನ ಬಾಂಧವರೊಂದಿಗೆ ಶನಿವಾರ ಧರ್ಮಸ್ಥಳಕ್ಕೆ ಬಂದು ಹೆಗ್ಗಡೆಯವರನ್ನು ಗೌರವಿಸಿ ಶುಭ ಹಾರೈಸಿದರು.ಕೆಸರಾದ ನೀರನ್ನು ಮತ್ತೆ ತಿಳಿಯಾಗಿ ಪರಿಶುದ್ಧಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅಪಪ್ರಚಾರ, ಆರೋಪಗಳಲೆಲ್ಲ ದೂರವಾಗಲಿ. ಹೆಗ್ಗಡೆಯವರಿಗೆ ಎಲ್ಲಾ ದೈವ-ದೇವರುಗಳು ದೀರ್ಘಾಯುರಾರೋಗ್ಯವನ್ನಿತ್ತು ಇನ್ನಷ್ಟು ಲೋಕಕಲ್ಯಾಣ ಕಾರ್ಯಗಳನ್ನು ಮಾಡುವಂತೆ ಹರಸಲೆಂದು ಸ್ವಾಮೀಜಿ ಪ್ರಾರ್ಥಿಸಿದರು.
ಕಾರ್ಕಳ ಸೀಮೆಯ ಎಲ್ಲಾ ಬಸದಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಪುರೋಹಿತರು ತಂದ ಪ್ರಸಾದವನ್ನು ಹೆಗ್ಗಡೆಯವರಿಗೆ ಅರ್ಪಿಸಿದರು. ಸ್ವಾಮೀಜಿಯವರು ಕಾರ್ಕಳ ಮಠದ ಬಸದಿಯ ವಿಶೇಷ ಪ್ರಸಾದವನ್ನು ಹೆಗ್ಗಡೆಯವರಿಗೆ ನೀಡಿ ಶುಭ ಹಾರೈಸಿದರು.
ಕಾರ್ಕಳದ ಡಾ. ಎಂ.ಎನ್. ರಾಜೇಂದ್ರಕುಮಾರ್ ಮಾತನಾಡಿ, ಸತ್ಯಕ್ಕೆ ಸದಾ ಜಯವಿದೆ. ಮಾತುಬಿಡ ಮಂಜುನಾಥ ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಸತ್ಯ ಪ್ರಕಟವಾಗುವುದರೊಂದಿಗೆ ಆರೋಪಿಗಳಿಗೆ ಶಿಕ್ಷೆಯಾಗಲಿ. ಹೆಗ್ಗಡೆಯವರ ಜೊತೆ ನಾವೆಲ್ಲ ಸದಾ ಪೂರ್ಣ ಬೆಂಬಲ ನೀಡಲು ಸಿದ್ಧರು, ಬದ್ಧರು ಎಂದು ಅವರು ಭರವಸೆ ನೀಡಿದರು.
ಹೇಮಾವತಿ ವೀ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಶಿರ್ತಾಡಿಯ ಎಸ್.ಡಿ. ಸಂಪತ್ ಸಾಮ್ರಾಜ್ಯ, ಸುದರ್ಶನ ಜೈನ್ ಬಂಟ್ವಾಳ, ಪುಷ್ಪರಾಜ ಜೈನ್, ಮಂಗಳೂರು, ಕುಲದೀಪ್, ಚೌಟರ ಅರಮನೆ, ಮೂಡಬಿದ್ರೆ, ಅಂಡಾರು ಮಹಾವೀರ ಹೆಗ್ಡೆ, ಅನಂತ್ರಾಜ ಪೂವಣಿ, ಶಿಶುಪಾಲ ಜೈನ್, ಮೋಹನ ಪಡಿವಾಳ್, ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ, ಗುಣವರ್ಮ ಜೈನ್, ಕಾರ್ಕಳ, ನೇಮಿರಾಜ ಆರಿಗಾ ಮೊದಲಾದವರು ಇದ್ದರು.
ತಮ್ಮ ಬಗ್ಗೆ ಹಾಗೂ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಸಮಾಜ ಬಾಂಧವರ ಭಕ್ತಿ-ಗೌರವ, ಅಭಿಮಾನ ಸದಾ ಇದೇ ರೀತಿ ಇರಲೆಂದು ಹಾರೈಸಿ, ಹೆಗ್ಗಡೆಯವರು ಎಲ್ಲರಿಗೂ ಶುಭ ಹಾರೈಸಿದರು. ಕಾರ್ಕಳ ಸೀಮೆಯಿಂದ ಸುಮಾರು ಮುನ್ನೂರು ಮಂದಿ ಶ್ರಾವಕರು-ಶ್ರಾವಕಿಯರು ಆಗಮಿಸಿದರು.