Site icon Suddi Belthangady

ಅನನ್ಯ ಭಟ್ ನಾಪತ್ತೆ ಪ್ರಕರಣ: ನಾನು ಹೇಳಿದ್ದು ಸುಳ್ಳು- ತಪ್ಪು ಒಪ್ಪಿಕೊಂಡ ಸುಜಾತ ಭಟ್

ಬೆಳ್ತಂಗಡಿ: ಅನನ್ಯ ಭಟ್ ನಾಪತ್ತೆ ಪ್ರಕರಣದಲ್ಲಿ ಎಸ್ಐಟಿ ಸುಜಾತಾ ಭಟ್ ಗೆ ನೋಟೀಸ್ ನೀಡಿರುವ ಬೆನ್ನಲ್ಲೇ ಸುಜಾತಾ‌ ಭಟ್ ಪ್ರಕರಣದಲ್ಲಿ ಉಲ್ಟಾ ಹೊಡೆದಿದ್ದಾರೆ.

Insightrush ಎಂಬ ಯೂಟ್ಯೂಬ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ‘ಅನನ್ಯ ಭಟ್ ಕುರಿತಂತೆ ನಾನು‌ ಹೇಳಿದ್ದೆಲ್ಲಾ ಸುಳ್ಳು. ಜಾಗದ ವಿಚಾರವಾಗಿ ನಾನು ಆ ರೀತಿ ಹೇಳಿದ್ದೆ. ಕೇಸನ್ನು ವಾಪಾಸು ಪಡೆಯುತ್ತೇನೆ’ ಎಂದು ಹೇಳಿಕೆ ನೀಡಿದ್ದಾರೆ.

ನನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳಕ್ಕೆ ಹೋಗಿದ್ದ ವೇಳೆ ನಾಪತ್ತೆಯಾಗಿರುವುದಾಗಿ ಸುಜಾತಾ ಭಟ್ ದೂರು ನೀಡಿದ್ದರು. ತಮ್ಮ ಪುತ್ರಿಯ ಫೋಟೋವನ್ನು ಕೂಡ ತೋರಿಸಿದ್ದರು. ಆದರೆ ಸುಜಾತಾ ಭಟ್ ಮದುವೆಯಾಗಿಲ್ಲ, ಮಕ್ಕಳು ಕೂಡ ಇಲ್ಲವೆಂದು ಅವರ ಸಹೋದರ ಸ್ಪೋಟಕ ಹೇಳಿಕೆ ನೀಡಿದ್ದರು.

ಸುಜಾತಾ ತೋರಿಸಿರುವ ಫೋಟೋ ನನ್ನ ತಂಗಿಯ ಫೋಟೋ ಎಂದು ತಿಳಿಸಿದ್ದರು. ಈ ನಡುವೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಸುಜಾತಾ ಭಟ್ ವಿರುದ್ಧ ದೂರು ನೀಡಿದ್ದಾರೆ. ಅನನ್ಯ ಭಟ್ ನಾಪತ್ತೆ ಪ್ರಕರಣದ ತನಿಖೆಯನ್ನು ಸರ್ಕಾರ ಎಸ್‌ಐಟಿಗೆ ವಹಿಸಿದೆ. ಇದರ ಬೆನ್ನಲ್ಲೇ ವಿಚಾರಣೆಗೆ ಹಾಜರಾಗಲು ಸುಜಾತಾ ಭಟ್ ಗೆ ತಿಳಿಸಲಾಗಿದ್ದು, ಅವರು ಕೇಸ್ ವಾಪಸ್ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.

Exit mobile version