Site icon Suddi Belthangady

ಸುಶಿಕ್ಷಿತರಾದರೂ ಸಂಸ್ಕಾರದ ಕೊರತೆ ಖೇದಕರ: ಪದ್ಮಪ್ರಸಾದ್

ಉಜಿರೆ: ಹಿಂದಿನ ಕಾಲದ ಜನರು ಶಿಕ್ಷಣವಂಚಿತರಾದರೂ ಸಂಸ್ಕಾರವಂತರಾಗಿದ್ದರು. ಆದರೆ ಪ್ರಸ್ತುತ ಕಾಲದ ಜನರು ಸುಶಿಕ್ಷಿತರಾದರೂ ಅವರಲ್ಲಿ ಸಂಸ್ಕಾರದ ಕೊರತೆ ಕಂಡು ಬರುತ್ತಿದೆ ಎಂದು ವೇಣೂರಿನ ಎಸ್.ಡಿ.ಎಂ. ಕೈಗಾರಿಕಾ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಪದ್ಮ ಪ್ರಸಾದ್ ಖೇದ ವ್ಯಕ್ತಪಡಿಸಿದರು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆ.8ರಂದು ಸಂಸ್ಥೆಯ ವಿಂಶತಿ ಹಿನ್ನೆಲೆ ಕಾರ್ಯಕ್ರಮ ಸರಣಿ ಭಾಗವಾಗಿ ಆಯೋಜಿಸಿದ್ದ ಒಂದು ದಿನದ ‘ಜೀವನ ಕೌಶಲ’ ಕಾರ್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. “ಹಿಂದೆ ಜನರು ಸಂಸ್ಕಾರವಂತರಾಗಿದ್ದರಿಂದ ಅಹಿತಕರ ಘಟನೆಗಳು ಘಟಿಸುತ್ತಿರಲಿಲ್ಲ. ಆದರೆ ಇಂದು ಉನ್ನತ ಶಿಕ್ಷಣ ಪಡೆದವರೇ ಭಯೋತ್ಪಾದನೆಯಂತಹ ಕುಕೃತ್ಯ ತೊಡಗಿರುವುದು ಕಂಡು ಬರುತ್ತಿದೆ. ಸಂಸ್ಕಾರಯುತ ಶಿಕ್ಷಣದ ಆವಶ್ಯಕತೆ ಎದ್ದು ಕಾಣುತ್ತಿದೆ” ಎಂದರು.

ಯಾವುದೇ ವೃತ್ತಿಯಲ್ಲಿ ಪರಿಣತಿ ಹೊಂದಬೇಕು ಆದರೆ ಮೊದಲು ಮಾನವನಾಗಬೇಕು. ಅದು ಆಕಾರದಿಂದಲ್ಲ; ಆಚಾರದಿಂದ. “ನೀ ಜಗಕೆ ಬಂದಾಗ ಜಗತ್ತು ನಕ್ಕಿತ್ತು – ನಾ ಅತ್ತಿದ್ದೆ. ನಾ ಜಗದಿಂದ ಹೋಗುವಾಗ ನೀ ನಗಬೇಕು, ಜಗತ್ತೇ ಅಳುವಂತೆ ಮಾಡಬೇಕು” ಎಂಬ ಸಂತ ಕಬೀರದಾಸರ ಮಾತಿನಂತೆ ಬದುಕಿ ಬಾಳಿ. – ಪದ್ಮಪ್ರಸಾದ್ ಹೇಳಿದರು.

ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕಿ, ಕಿರಿಯ ತರಬೇತಿ ಅಧಿಕಾರಿ ಸಂದ್ಯಾ ಸ್ವಾಗತಿಸಿದರು.

Exit mobile version