ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಳ್ತಂಗಡಿ ಘಟಕ ಇವುಗಳ ಆಶ್ರಯದಲ್ಲಿ ಜು. 31ರಂದು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕತರ ಉಪನ್ಯಾಸಮಾಲೆ – 3 ಇದರ ಅಡಿಯಲ್ಲಿ ಶಿವರಾಮ ಕಾರಂತರ ಸ್ಮರಣೆ ಕಾರ್ಯಕ್ರಮ ನಡೆಯಿತು.
ಪ್ರಧಾನ ಭಾಷಣಕಾರರಾಗಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಉಪನ್ಯಾಸಕ ಡಾ. ರಾಜೇಶ್ ಅವರು ಆಗಮಿಸಿ ಕಾರಂತರ ಬದುಕಿನ ವಿವಿಧ ಮಜಲುಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯಧುಪತಿ ಗೌಡ ವಹಿಸಿದ್ದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಸುಕುಮಾರ್ ಜೈನ್, ಹಿರಿಯ ಉಪನ್ಯಾಸಕ ಆನಂದ ಡಿ. ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕರಾದ ಡಾ. ಗಣೇಶ್ ಭಟ್ ಹಾಗೂ ಡಾ. ಅಮೃತ ರಶ್ಮಿ ಕಾರ್ಯಕ್ರಮ ಸಂಯೋಜಿಸಿದರು. ಸಮಿತ ಸ್ವಾಗತಿಸಿದರು. ಮನ್ವಿತಾ ಮತ್ತು ತಂಡದಿಂದ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ರಕ್ಷಾ ನಿರೂಪಿಸಿದರು. ಧನುಶ್ರೀ ವಂದನಾರ್ಪಣೆಗೈದರು.