Site icon Suddi Belthangady

ಧರ್ಮಸ್ಥಳ: ಗ್ರಾಮದ ಬೊಳಿಯಾರುವಿನಲ್ಲಿ ಕಾಡಾನೆ ಹಾವಳಿ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬೊಳಿಯಾರು ಸಮೀಪ ಕಾಡಾನೆ ಹಾವಳಿ ಮುಂದುವರಿದಿದ್ದು, ಕೃಷಿಕರು ತೀವ್ರ ಆತಂಕದಲ್ಲಿದ್ದಾರೆ.

ಇಲ್ಲಿ ಕಳೆದ ಮೂರು ದಿನಗಳಿಂದ ಕಾಡಾನೆಗಳು ಓಡಾಟ ನಡೆಸುತ್ತಿದೆ. ಇಲ್ಲಿ ಹಲವರ ತೋಟಗಳಿಗೆ ಆನೆ ನುಗ್ಗಿದೆ. ಬಾಳೆ ಹಾಗೂ ಅಡಿಕೆ ಗಿಡಗಳನ್ನು ನಾಶಗೊಳಿಸಿದೆ. ಕೊಕ್ಕಡದಲ್ಲಿ ಆನೆ ದಾಳಿಗೆ ವ್ಯಕ್ತಿ ಬಲಿಯಾದ ಘಟನೆಯ ಬಳಿಕ ಆನೆಯನ್ನು ಓಡಿಸಲೂ ಜನರು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ.

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಓಡಾಟ: ಧರ್ಮಸ್ಥಳ ಪೆರಿಯಶಾಂತಿ ರಸ್ತೆಯ ಬದಿಯಲ್ಲಿಯೇ ಈ ಆನೆಗಳು ಓಡಾಟ ನಡೆಸುತ್ತಿದೆ. ಜು.23ರಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಒಂಟಿ ಸಲಗವೊಂದು ಬೊಳಿಯಾರಿನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಅರಣ್ಯದತ್ತ ಸಾಗಿದೆ.

ಈ ವೇಳೆ ವಾಹನಗಳು ಇಲ್ಲದಿದ್ದುದರಿಂದ ಅಪಾಯ ಸಂಭವಿಸಿಲ್ಲ. ಜು.24ರಂದು ಕಾಡಾನೆಗಳು ಬೊಳಿಯಾರು ಪರಿಸರಕ್ಕೆ ಬಂದಿದ್ದು ಕೃಷಿಗೆ ಹಾನಿಯುಂಟುಮಾಡಿದೆ.
ಕಾಡಾನೆಗಳು ನಿರಂತರ ಕೃಷಿ ಹಾನಿ ಮಾಡುತ್ತಿದ್ದರೂ ಅವುಗಳನ್ನು ಓಡಿಸುವ ನಿಟ್ಟಿನಲ್ಲಿ ಯಾವುದೆ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಮುಂದಾಗುತ್ತಿಲ್ಲ ಎಂದು ಸ್ಥಳೀಯ ಕೃಷಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Exit mobile version