Site icon Suddi Belthangady

ಇಳಂತಿಲ: ನಿಧನರಾದ ಗ್ರಾ.ಪಂ. ಸದಸ್ಯರಿಗೆ ನುಡಿನಮನ

ಬೆಳ್ತಂಗಡಿ: ಅಕಾಲಿಕವಾಗಿ ಮರಣ ಹೊಂದಿದ ಇಳಂತಿಲ ಗ್ರಾ.ಪಂ. ಅಧ್ಯಕ್ಷ ವಸಂತ ಶೆಟ್ಟಿ ಹಾಗೂ ಸದಸ್ಯ ಸುಪ್ರೀತ್‌ ಪಾಡೆಂಕಿಯವರಿಗೆ ಇಳಂತಿಲ ಗ್ರಾ.ಪಂ. ಸಭಾಂಗಣದಲ್ಲಿ ನುಡಿನಮನ ಕಾರ್ಯಕ್ರಮ ನಡೆಯಿತು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸವಿತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ ಭಾಗವಹಿಸಿ ಅಗಲಿದ ಇಬ್ಬರಿಗೂ ಪುಷ್ಪ ನಮನ ಸಲ್ಲಿಸಿದರು.

ನುಡಿ ನಮನ ಸಲ್ಲಿಸಿ ಮಾತನಾಡಿದ ಮಾಜಿ ಗ್ರಾಮ ಪಂಚಾಯತ್‌ ಅಧ್ಯಕ್ಷ, ಅಪರ ಸರಕಾರಿ ವಕೀಲ ಮನೋಹರ ಕುಮಾರ್ ಮಾನತಾಡಿ, ವಸಂತ ಶೆಟ್ಟಿಯವರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಜಾತಿ, ಮತ, ಪಕ್ಷ ಬೇಧ ಮರೆತು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಮೂಲಕ ಗ್ರಾಮದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದರಲ್ಲದೆ, ಅದೇ ರೀತಿ ಸೌಂಡ್ಸ್ ಮತ್ತು ಲೈಟಿಂಗ್ಸ್ ವ್ಯವಹಾರ ಮಾಡುತ್ತಿದ್ದ ಅವರಿಗೆ ಹಲವಾರು ಗ್ರಾಹಕರು ಹಣ ನೀಡಲು ಬಾಕಿ ಇರುವುದಾಗಿ ತಿಳಿದು ಬಂದಿದ್ದು, ಅಂತಹವರು ಅವರ ಬಾಕಿ ಹಣವನ್ನು ಅವರ ಮನೆಯವರಿಗೆ ನೀಡುವ ಮೂಲಕ ಅವರ ಮನೆಯವರ ಕಷ್ಟಕ್ಕೆ ನೆರವಾಗಬೇಕೆಂದು ವಿನಂತಿಸಿದರು.

ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಿಕಾ ಭಟ್ ಮಾತನಾಡಿ, ಕಳೆದ ವರ್ಷ ಮರಣ ಹೊಂದಿದ ಗ್ರಾ.ಪಂ. ಸದಸ್ಯರಾಗಿದ್ದ ರೇಖಾ ಅಂತರ ಸೇರಿದಂತೆ ಅಧ್ಯಕ್ಷ ವಸಂತ ಶೆಟ್ಟಿ ಮತ್ತು ಸದಸ್ಯ ಸುಪ್ರೀತ್ ಪಾಡೆಂಕಿಯವರ ಅಕಾಲಿಕ ಮರಣದಿಂದ ನಮ್ಮ ಗ್ರಾ.ಪಂ.ಗೆ ತುಂಬಲಾರದ ನಷ್ಟ ಉಂಟಾಗಿದ್ದು, ಅಗಲಿದ ದಿವ್ಯ ಆತ್ಮಗಳಿಗೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪನ್ಯ ಶಂಕರ ಭಟ್, ಯು.ಕೆ. ಇಸುಬು, ಗ್ರಾಮ ಪಂಚಾಯತ್ ಕಾರ್ಯದರ್ಶಿ ವಿಜಯ ಬಿ., ಗ್ರಾಮ ಪಂಚಾಯತ್‌ ಸದಸ್ಯ ಸಿದ್ದೀಕ್, ತಾ.ಪಂ. ಮಾಜಿ ಸದಸ್ಯ ಈಶ್ವರ ಭಟ್, ಉಪ್ಪಿನಂಗಡಿ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಿ. ಪ್ರಸಾದ, ಎಂಜಿನಿಯರ್ ಗಫೂರ್ ಸಾಬ್, ಜನಾರ್ದನ ಗೌಡ ಅಣ್ಣಾಜೆ, ಗ್ರಾ.ಪಂ. ಮಾಜಿ ಸದಸ್ಯೆ ಸುಮತಿ ನೂಜ, ಶಂಕರ ಭಟ್ ನಿಡ್ಡಾಜೆ, ಗ್ರಾಮ ಪಂಚಾಯತ್ ಸಿಬ್ಬಂದಿ ಸುಂದರ ನಾಯ್ಕ ಮತ್ತಿತರರು ನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ 1 ನಿಮಿಷದ ಮೌನ ಪ್ರಾರ್ಥನೆ ನಡೆಸಲಾಯಿತು.

Exit mobile version