Site icon Suddi Belthangady

ಜೇಸಿ ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆ – ಸ್ಥಾಪಕ ಚೇರ್ಮನ್ ಆಗಿ ಅಭಿನಂದನ್ ಹರೀಶ್ ಕುಮಾರ್ ಅಧಿಕಾರ ಸ್ವೀಕಾರ

ಬೆಳ್ತಂಗಡಿ: ಜೆಸಿಐ ಭಾರತದ ವ್ಯವಹಾರ ಹಾಗೂ ಉದ್ಯಮಿಗಳ ಸಂಪರ್ಕ ಜಾಲವಾಗಿ ಬೆಳೆಯುತ್ತಿರುವ ಜೇಸಿ ಚೇಂಬರ್ ಆಫ್ ಕಾಮರ್ಸ್ ಇದರ ಉದ್ದೇಶಿತ ಘಟಕ ಬೆಳ್ತಂಗಡಿಯಲ್ಲಿ ಸ್ಥಾಪನೆಯಾಗಿ ಜು.16ರಂದು ಉಜಿರೆಯ ಓಷ್ಯನ್ ಪರ್ಲ್ ಇಲ್ಲಿ ಉದ್ಘಾಟನೆ ಹಾಗೂ ಪದಪ್ರಧಾನ ಸಮಾರಂಭ ನಡೆಯಿತು.

ಜೆಸಿಐ ಬೆಳ್ತಂಗಡಿಯ ಪೂರ್ವಾಧ್ಯಕ್ಷ ರಾಜ್ಯ ಯುವ ಕಾಂಗ್ರೆಸ್‌‌‌‌ನ ಕಾರ್ಯದರ್ಶಿ ಯುವ ಉದ್ಯಮಿ ಜೇಸಿ ಅಭಿನಂದನ್ ಹರೀಶ್ ಕುಮಾರ್ ಸ್ಥಾಪಕ ಚೇರ್ಮನ್ ಆಗಿ ಪದ ಸ್ವೀಕರಿಸಿದರು. ಜೆಸಿಐ ವಲಯ 15ರ ಜೆಕಾಮ್ ಚೇರ್ಮೆನ್ ದೀರಾಜ್ ಬಿ. ಉದ್ಯಾವರ್ ಸಭಾಧ್ಯಕ್ಷರಾಗಿ ನೂತನ ಚೇರ್ಮನ್ ಇವರಿಗೆ ಪ್ರಮಾಣವಚನ ಬೋಧಿಸಿದರು. ಜೆಕಾಂ ಬೆಳ್ತಂಗಡಿ ಟೇಬಲ್ ನ ಪದಾಧಿಕಾರಿಗಳಾದ ಉಪಾಧ್ಯಕ್ಷ ಪ್ರಶಾಂತ್ ಲಾೖಲ, ಕಾರ್ಯದರ್ಶಿ ಶ್ರೇಯ ಶೆಟ್ಟಿ, ಕೋಶಾಧಿಕಾರಿ ಸುದೀಪ್ ಸಾಲ್ಯಾನ್, ನಿರ್ದೇಶಕರಾದ ವಿಶಾಲ್ ಆಗಸ್ಟಿನ್ ಮತ್ತು ಸುಶೀಲ್ ಎಸ್. ಇವರಿಗೆ ನೂತನ ಚೇರ್ಮನ್ ಅಭಿನಂದನ್ ಹರೀಶ್ ಅವರು ಪ್ರಮಾಣವಚನ ಬೋಧಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜೆಸಿಐ ಭಾರತದ ವಲಯ 15ರ ಪೂರ್ವ ವಲಯಾಧ್ಯಕ್ಷ ಉದ್ಯಮಿ ರೋಯನ್ ಉದಯ ಕ್ರಾಸ್ತಾ ಇವರು ಜೆಕಾಮ್ ನ 10 ಸದಸ್ಯರಿಗೆ ಪ್ರಮಾಣವಚನ ಬೋಧಿಸಿ, ಜೆಕಾಮ್ ಬೆಳ್ತಂಗಡಿ ಟೇಬಲ್ ಅನ್ನು ಉದ್ಘಾಟಿಸಿ ಜೆಸಿಐ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿ ತರಬೇತಿಗಳ ಮೂಲಕ ಯುವ ಸಮುದಾಯಕ್ಕೆ ಬೇಕಾಗುವ ನಾಯಕತ್ವ ಗುಣಗಳು, ಭಾಷಣ ಕಲೆಗಳು ಇನ್ನಿತರ ತರಬೇತಿಗಳ ಮೂಲಕ ಯುವಕರಿಗೆ ಉತ್ತಮ ಅವಕಾಶ ಒದಗಿಸುತ್ತಿದ್ದು ಇದೀಗ ಜೆಕಾಮ್ ಎಂಬ ಪರಿಕಲ್ಪನೆಯಲ್ಲಿ ಉದ್ಯಮಿಗಳಿಗೆ ವ್ಯವಹಾರಸ್ತರಿಗೆ ರಾಷ್ಟ್ರ- ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಸಂಪರ್ಕ ಜಾಲವಾಗಿ ಅವಕಾಶಗಳನ್ನು ಕಲ್ಪಿಸುತ್ತಿದೆ ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜೆಕಾಮ್ ಟೇಬಲ್ ಮಂಗಳೂರು ಇದರ ಕೋಚ್ ಆಗಿರುವಂತ ದೀಪಕ್ ರಾಜ್ ಅವರು, ಆಗಮಿಸಿದ ಜೇಸಿಯೇತರ ಉದ್ಯಮಿಗಳನ್ನು ಉದ್ದೇಶಿಸಿ ಜೆಕಾಮ್ ಎಂದರೆ ಏನು – ಹೇಗೆ ಕೆಲಸ ಮಾಡುತ್ತಿದೆ, ನಮ್ಮ ಉದ್ಯಮ ಮತ್ತು ವ್ಯವಹಾರಗಳನ್ನು ಜೆಕಾಮ್ ನಿಂದ ಹೇಗೆ ರಾಷ್ಟ್ರದಾದ್ಯಂತ ಸಂಪರ್ಕ ಸಾಧಿಸಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಜೆಸಿಐ ವಲಯ 15ರ ವಲಯ ಉಪಾಧ್ಯಕ್ಷ ರಂಜಿತ್ ಎಚ್‌.ಡಿ. ಹಾಗೂ ಬೆಳ್ತಂಗಡಿ ಇದರ ಘಟಕ ಅಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ್ ಹಾಗೂ ಜೆಕಾಂ ಬೆಳ್ತಂಗಡಿ ಇದರ ಕೋಚ್ ಆಗಿರುವಂತ ಅಭಿಜಿತ್ ನಾಯ್ಕ್ ಉಪಸ್ಥಿತರಿದ್ದರು.

ಜೇಸಿ ಪ್ರಶಾಂತ್ ಲಾೖಲ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು, ಜೇಸಿ ವಾಣಿಯನ್ನು ಶೀತಲ್ ಜೈನ್ ಅವರು ಉದ್ಘೋಷಿಸಿದರು. ಜೇಸಿ ಸುನೀತಾ ಬೈಜು, ಸುದೀಪ್ ಸಾಲ್ಯಾನ್, ವಿಶಾಲ್ ಆಗಸ್ಟಿನ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಜೆಕಾಂ ಇದರ ಕಾರ್ಯದರ್ಶಿ ಶ್ರೇಯ ಶೆಟ್ಟಿ ಸಭೆಗೆ ವಂದನಾರ್ಪಣೆ ಸಲ್ಲಿಸಿದರು. ವಿಶೇಷ ಆಹ್ವಾನಿತರಾಗಿ ಅನ್ನಪೂರ್ಣ ಮೆಟಲ್ ಇದರ ಮಾಲಕರಾದ ರಾಘ್ನೇಶ್ ಹಾಗೂ ಜೇಸಿಯೇತರ ಉದ್ಯಮಿಗಳು, ಜೆಕಾಮ್ ಟೇಬಲ್ ಮಂಗಳೂರು ಹಾಗೂ ಪುತ್ತೂರು ಇದರ ಚೇರ್ಮನ್ ಹಾಗೂ ಸದಸ್ಯರು, ಇತರ ಆಹ್ವಾನಿತ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Exit mobile version