ಕೊಕ್ಕಡ: ಕೊಕ್ಕಡ ಗ್ರಾಮದ ಕೆಂಪಕೋಡಿ ನಿವಾಸಿ ರಘುರಾಮ ಮಡಿವಾಳ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಕೆಲವು ವರ್ಷಗಳ ಹಿಂದೆ ಮನೆಗೆ ಆಧಾರವಾಗಿದ್ದ ಅವರಿಬ್ಬರು ಮಕ್ಕಳು ಅನಾಹುತವಾಗಿ ಜೀವ ಕಳೆದುಕೊಂಡಿದ್ದಾರೆ. ರಘುರಾಮ ಮಡಿವಾಳರು ಒಂದು ಕಾಲನ್ನು ಕಳೆದುಕೊಂಡು ಇದೀಗ ಮನೆಗೆ ಕೂಡಲು ಸಹ ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಕ್ಷೇತ್ರದ ಧಾರ್ಮಿಕ ಮುಖಂಡರು ಹಾಗೂ ಉದ್ಯಮಿ ಕಿರಣ್ ಚಂದ್ರ ಡಿ. ಪುಷ್ಪಗಿರಿ ಅವರು ರಘುರಾಮ ಮಡಿವಾಳರ ಮನೆಗೆ ಭೇಟಿ ನೀಡಿದರು. ಅವರ ಆರೋಗ್ಯವನ್ನು ವಿವರವಾಗಿ ವಿಚಾರಿಸಿ, ಮನೋಬಲ ಹೆಚ್ಚಿಸಲು ಸದಾ ನಾನು ನಿಮ್ಮ ಜೊತೆಯಲ್ಲಿರುತ್ತೇನೆ ಎಂಬ ಮಾತುಗಳ ಮೂಲಕ ಧೈರ್ಯ ತುಂಬಿದರು. ದೈನಂದಿನ ಬದುಕಿಗೆ ನೆರವಾಗುವ ನಿಟ್ಟಿನಲ್ಲಿ ಆರ್ಥಿಕ ಸಹಾಯದ ಜೊತೆಗೆ ವೀಲ್ ಚೇರ್ ಅನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಕೊಕ್ಕಡ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಶ್ರೀನಾಥ್, ಪುರುಷೋತ್ತಮ ಕುದ್ಕೋಳಿ, ಶಿವಪ್ಪಗೌಡ ಜಾರಿಗೆತ್ತಡಿ, ಕೆ.ಯು. ಕರ್ಕೇರ ಮತ್ತು ಕೊಕ್ಕಡ ಗ್ರಾ.ಪಂ. ಸದಸ್ಯ ಜಗದೀಶ್ ಉಪಸ್ಥಿತರಿದ್ದರು.