Site icon Suddi Belthangady

ಅರಸಿನಮಕ್ಕಿ ಸ. ಪ್ರೌ. ಶಾಲೆಯಲ್ಲಿ ಶಾಲಾ ಸಂಸತ್ ಪದಗ್ರಹಣ: ಭಾರತದ ಭವಿಷ್ಯ ವಿದ್ಯಾರ್ಥಿಗಳ ಕೈಲಿದೆ: ವೃಷಾಂಕ್ ಖಾಡಿಲ್ಕರ್

ಅರಸಿನಮಕ್ಕಿ: ಶಾಲೆ – ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಿ ಶಾಸನ ಸಭೆಗಳ ತಿಳುವಳಿಕೆ ನೀಡುವುದು ಉತ್ತಮ ಕೆಲಸ. ಇದರಿಂದ ಭವಿಷ್ಯದಲ್ಲಿ ಈ ದೇಶ ಹೇಗಿರಬೇಕೆಂದು ಯೋಚಿಸಿ ಸಮರ್ಥ ನಾಯಕರನ್ನು ಆಯ್ಕೆ ಮಾಡಲು, ಬಲಿಷ್ಠ ರಾಷ್ಟ್ರ ನಿರ್ಮಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗಲಿದೆ ಎಂದು ಅರಸಿನಮಕ್ಕಿ ಗ್ರಾ.ಪಂ. ‘ಅರಿವು ಕೇಂದ್ರ’ದ ಗೌರವ ಸಮಿತಿ ಸದಸ್ಯ ವೃಷಾಂಕ್ ಖಾಡಿಲ್ಕರ್ ಹೇಳಿದ್ದಾರೆ.
ಅವರು ಇಲ್ಲಿನ ಸರಕಾರಿ ಪ್ರೌಢ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಸಂಸತ್- 2025 ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸದ್ಯಕ್ಕೆ ಭಾರತದಲ್ಲಿ ಮಾತ್ರವೇ ಆಡಳಿತ ಸುವ್ಯವಸ್ಥಿತವಾಗಿದೆ. ಇದಕ್ಕೆ ಪ್ರಜಾಪ್ರಭುತ್ವ ಕಾರಣ. ಇತರ ದೇಶಗಳ ಸ್ಥಿತಿ ಅಧೋಗತಿ ತಲುಪಿದೆ. ಮಕ್ಕಳಿಗೆ ತಂದೆ -ತಾಯಿ, ಶಿಕ್ಷಕರು, ರಾಷ್ಟ ಕಟ್ಟಿದ ಮಹಾಪುರುಷರು, ಸಮಾಜ ಸೇವಕರೇ ನಾಯಕರು ಮತ್ತು ಆದರ್ಶ. ಅವರ ತ್ಯಾಗ, ಪರಿಶ್ರಮವನ್ನು ಸದಾಕಾಲ ನೆನಪು ಮಾಡಿಕೊಳ್ಳಿ. ರಾಜಕಾರಣಿಗಳು, ಸಿನಿಮಾ ನಟರು, ಕ್ರಿಕೆಟ್ ನ ನಾಯಕರುಗಳನ್ನು ಅನುಕರಣೆ ಮಾಡದೇ, ದುಡ್ಡಿನ ಹಿಂದೆ ಹೋಗದೆ ಗುಣ, ಶಿಸ್ತು, ಸಂಸ್ಕಾರ ಕ್ಕೆ ಹೆಚ್ಚಿನ ಆದ್ಯತೆ ಕೊಡಿ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಣೇಶ್ ಕುಲಾಲ್ ಉತ್ತಮ ಫಲಿತಾಂಶ ಬರುವಲ್ಲಿ ಉತ್ತಮವಾಗಿ ಸೇವೆ ನೀಡುತ್ತಿರುವ ಶಾಲೆಯ ಶಿಕ್ಷಕ ವೃಂದವನ್ನು ಅಭಿನಂದಿಸಿದರು. ಶಾಲಾ ಮುಖ್ಯಶಿಕ್ಷಕಿ ಮಂಜುಳಾ ಅವರು ಶಾಲೆಯ ಉನ್ನತಿಗೆ ಪೋಷಕರ ಸಹಕಾರವನ್ನು ಯಾಚಿಸಿದರು. ಅನೇಕ ಸೌಲಭ್ಯಗಳ ಕೊರತೆಯ ನಡುವೆಯೂ ಉತ್ತಮ ಫಲಿತಾಂಶವನ್ನು ಶಾಲೆ ಪಡೆಯುತ್ತಿರುವುದಾಗಿ ತಿಳಿಸಿದರು. ಶಾಲಾ ಸಂಸತ್ ಪದಾಧಿಕಾರಿಗಳಿಗೆ ಮತ್ತು ಮಕ್ಕಳ ವಿವಿಧ ಸಮಿತಿಗಳಿಗೆ ಪ್ರಮಾಣ ಪತ್ರವನ್ನು ಹಸ್ತಾಂತರಿಸಲಾಯಿತು. ಶಾಲಾಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಲಿಂಗಪ್ಪ ಗೌಡ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕಿ ಮೀನಾಕ್ಷಿ ಪ್ರಮಾಣ ವಚನ ಬೋಧಿಸಿದರು. ಬಳಿಕ ಶಾಲಾಭಿವೃದ್ಧಿ ಸಮಿತಿ ಸದ್ಯಸರು ಮತ್ತು ವಿದ್ಯಾರ್ಥಿಗಳು ತರಕಾರಿ, ಹಣ್ಣುಹಂಪಲಿನ ಗಿಡ ನಾಟಿ ಮಾಡಿ ಪೌಷ್ಟಿಕವನ ನಿರ್ಮಾಣ ಮಾಡಿದರು. ಇಂಗ್ಲಿಷ್ ಶಿಕ್ಷಕಿ ಚೇತನಾ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕಿ ಚೇತನಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸುಧೀಂದ್ರ ವಂದಿಸಿದರು.

Exit mobile version