Site icon Suddi Belthangady

ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಆಚರಣೆ

ಬೆಳ್ತಂಗಡಿ: ದೂರ ದೃಷ್ಟಿಯ ಆಡಳಿತಗಾರರಾಗಿ ಸಮೃದ್ಧವಾದ ಬೆಂಗಳೂರು ನಗರವನ್ನು ನಿರ್ಮಿಸಲು ಶ್ರಮಿಸಿದ ಕೆಂಪೇಗೌಡರು ಈ ನಾಡು ಕಂಡ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಆನಂದ ಗೌಡ ಹೇಳಿದರು.

ಅವರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ಮತ್ತು ವಾಣಿ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಜರಗಿದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ನೀಡುತ್ತಾ, ಕೆಂಪೇಗೌಡರು ತನ್ನ ಆಡಳಿತ ಕೌಶಲ್ಯದಿಂದ ಬೆಂಗಳೂರನ್ನು ವ್ಯಾಪಾರ, ವಾಣಿಜ್ಯ, ಕೃಷಿ ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡಿದ್ದಲ್ಲದೆ ಜನರ ಬಳಕೆಗೆ ನೀರಾವರಿಗಾಗಿ ಹಲವಾರು ಕೆರೆಗಳನ್ನು ನಿರ್ಮಿಸಿದ್ದರು.

ಪ್ರತಿಯೊಂದು ವೃತ್ತಿ ಬಾಂಧವರಿಗೂ ಇಲ್ಲಿ ಮಹತ್ವವನ್ನು ನೀಡಿದ್ದು ಪ್ರಜಾ ಹಿತವನ್ನು ಕಾಪಾಡಿದ್ದರು. ಇಂದು ಶಿಕ್ಷಣ, ಉದ್ಯಮ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆಯನ್ನು ಮಾಡುತ್ತಿರುವ ಬೆಂಗಳೂರಿನಡೆಗೆ ಇಡೀ ಜಗತ್ತೇ ಕಣ್ಣು ಹಾಯಿಸುವಂತಾಗಿದೆ. ಇದೆಲ್ಲರ ನಿರ್ಮಾತೃ ಕೆಂಪೇಗೌಡರನ್ನು ಸ್ಮರಿಸುವುದು ಆದ್ಯ ಕರ್ತವ್ಯವಾಗಿದೆ ಎಂದರು.

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಜಯಾನಂದ ಗೌಡ ಟಿ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಉಪಾಧ್ಯಕ್ಷ ನಾರಾಯಣಗೌಡ ದೇವಸ್ಯ, ಕಾರ್ಯದರ್ಶಿ ಗಣೇಶ್ ಗೌಡ, ಕೋಶಾಧಿಕಾರಿ ಯುವರಾಜ ಅನಾರ್, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ ಸವಣಾಲು, ಮಾಜಿ ಕಾರ್ಯದರ್ಶಿ ದುಗ್ಗಪ್ಪ ಗೌಡ, ವಾಣಿ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಪ್ರಸಾದ್ ಕುಮಾರ್, ವಾಣಿ ಆಂಗ್ಲ ಮಾಧ್ಯಮ ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಹಾಸಿನಿ ಉಪಸ್ಥಿತರಿದ್ದರು.

ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಮುಖ್ಯೋಪಾಧ್ಯಾಯ ಲಕ್ಷ್ಮೀನಾರಾಯಣ ಕೆ. ಸ್ವಾಗತಿಸಿದರು. ಉಪನ್ಯಾಸಕ ಬೆಳಿಯಪ್ಪ ಕೆ. ಕಾರ್ಯಕ್ರಮ ನಿರೂಪಿಸಿದರು. ವಾಣಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ. ಧನ್ಯವಾದವಿತ್ತರು.

Exit mobile version