Site icon Suddi Belthangady

ಹತ್ಯೆ ಮತ್ತು ಅತ್ಯಾಚಾರದ ಮಾಹಿತಿ ನೀಡುವುದಾಗಿ ಬರೆದಿದ್ದ ಪತ್ರ ವೈರಲ್: ಎಸ್ಪಿ ಭೇಟಿಗಾಗಿ ಬೆಂಗಳೂರಿನಿಂದ ವಕೀಲರ ನಿಯೋಗ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹತ್ಯೆ ಮತ್ತು ಅತ್ಯಾಚಾರದ ಮಾಹಿತಿ ಇರುವ ವ್ಯಕ್ತಿ ಪೊಲೀಸರಿಗೆ ಶರಣಾಗತಿಯಾಗಲಿದ್ದಾರೆ ಎಂದು ಪತ್ರ ವೈರಲ್ ಆದ ಬೆನ್ನಲ್ಲಿಯೇ ದ.ಕ. ಎಸ್ಪಿ ಡಾ.ಅರುಣ್ ಅವರನ್ನು ಭೇಟಿ ಮಾಡಲು ಜೂ.27ರಂದು ಬೆಂಗಳೂರಿನ ವಕೀಲರ ನಿಯೋಗ ಆಗಮಿಸಿದೆ.

ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್‌ ಎಸ್‌. ದೇಶಪಾಂಡೆ ನಿಯೋಗ ದ.ಕ ಎಸ್ಪಿ ಡಾ. ಅರುಣ್ ಅವರನ್ನು ಭೇಟಿಯಾಗಲು ಆಗಮಿಸಿತ್ತು. ಆದರೆ ಎಸ್ಪಿ ಅನುಪಸ್ಥಿತಿ ಹಿನ್ನಲೆ ವಕೀಲರ ನಿಯೋಗ ವಾಪಸ್ ತೆರಳಿದೆ. ಧರ್ಮಸ್ಥಳ ಗ್ರಾಮದಲ್ಲಿ ನಡೆದ ಹತ್ಯೆ ಹಾಗೂ ಅತ್ಯಾಚಾರಗಳ ಮಾಹಿತಿ ಇರುವ ವ್ಯಕ್ತಿ ತಾನು ಕೊಲೆ ಮಾಡಿದ ಬಳಿಕ ಹೆಣಗಳನ್ನು ಹೂತು ಹಾಕಿದ ಪಾಪಪ್ರಜ್ಞೆಯಿಂದ ಶರಣಾಗತಿಯಾಗುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.ಸೂಕ್ತ ಭದ್ರತೆ ಒದಗಿಸಿದರೆ ಹೂತ ಹೆಣಗಳ ಮಾಹಿತಿ ನೀಡುವ ಬಗ್ಗೆ ಉಲ್ಲೇಖಿಸಲಾಗಿತ್ತು.

ಈ ಪತ್ರ ವೈರಲ್ ಆದ ಬೆನ್ನಲ್ಲೇ ಧರ್ಮಸ್ಥಳ ಠಾಣಾ ಪೊಲೀಸರು ಪತ್ರದಲ್ಲಿ ಹೆಸರು ಉಲ್ಲೇಖಿಸಿದ್ದ ವಕೀಲರನ್ನು ಸಂಪರ್ಕಿಸಿದ್ದರು. ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್‌. ದೇಶಪಾಂಡೆ ಎಂಬವರನ್ನು ಪೊಲೀಸರು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದರು. ವ್ಯಕ್ತಿಯೋರ್ವ ತಮ್ಮ ಬಳಿ ಬಂದು ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ ತನಗೆ ಮಾಹಿತಿಯಿರುವುದಾಗಿಯೂ
ತಾನು ಧರ್ಮಸ್ಥಳ ಪೊಲೀಸ್‌ ಠಾಣೆಗೆ ಶರಣಾಗಿ ಮಾಹಿತಿ ನೀಡಲು ಸಿದ್ಧನಿರುವುದಾಗಿ ತಿಳಿಸಿದ್ದಾನೆ ಎಂದು ವಕೀಲರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೆ ಆ ವ್ಯಕ್ತಿಗೆ ಅಗತ್ಯ ಕಾನೂನು ಸುರಕ್ಷತೆಯನ್ನು ಕಲ್ಪಿಸಿದ ಬಳಿಕ ಹಾಜರುಪಡಿಸುವುದಾಗಿ ವಕೀಲರು ಹೇಳಿದ್ದರು.

ಅಲ್ಲದೆ ಸಂಬಂಧಪಟ್ಟ ಆ ವ್ಯಕ್ತಿ ಠಾಣೆಗೆ ಹಾಜರಾಗಿ ಮಾಹಿತಿ ನೀಡಿದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್ ಸ್ಪಷ್ಟನೆ ನೀಡಿದ್ದರು.
ಸದ್ಯ ಆ ವ್ಯಕ್ತಿ ವಕೀಲರ ಮೂಲಕ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರವನ್ನು ಸಲ್ಲಿಸಿರುವ ಮಾಹಿತಿ ಲಭ್ಯವಾಗಿದೆ.

Exit mobile version