ಮುಂಡಾಜೆ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ 2025- 26ನೇ ಸಾಲಿನ ಯಕ್ಷಧ್ರುವ ಯಕ್ಷ ಶಿಕ್ಷಣ ಕಾರ್ಯಕ್ರಮವನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಬೆಳ್ತಂಗಡಿ ಘಟಕ ಸ್ಥಾಪಕ ಸಂಚಾಲಕ ರಘುರಾಮ್ ಶೆಟ್ಟಿ ಸಾಧನ ಉದ್ಘಾಟಿಸಿ, ಯಕ್ಷ ಶಿಕ್ಷಣದ ಪ್ರಾಮುಖ್ಯತೆ ಮತ್ತು ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣದಿಂದ ಆಗುವ ಅನುಕೂಲಗಳ ಬಗ್ಗೆ ಮನ ಮುಟ್ಟುವಂತೆ ತಿಳಿಸಿದರು.
ಸಭಾಧ್ಯಕ್ಷತೆ ವಹಿಸಿದ ಬೆಳ್ತಂಗಡಿ ಘಟಕದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ, ಸತೀಶ್ ಶೆಟ್ಟಿ ಪಟ್ಲ ಅವರ ಮೂಲಕ ಇಂದು ರಾಜ್ಯಾದ್ಯಂತ ಯಕ್ಷಗಾನ ಪಸರಿಸುತ್ತಿದ್ದು ಯುವ ಪೀಳಿಗೆಯು ಯಕ್ಷಗಾನವನ್ನು ಬೆಳೆಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಾ ಮೂರನೇ ವರ್ಷ ವಸತಿ ಶಾಲೆ ಮುಂಡಾಜೆಯಲ್ಲಿ ಯಕ್ಷಗಾನ ತರಗತಿಗಳನ್ನು ಉದ್ಘಾಟಿಸಲಾಗಿದೆ. ಇದರ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು. ಹಾಗೂ ತಮಗೆ ಅತ್ಯುತ್ತಮ ಯಕ್ಷಗಾನ ಗುರುಗಳಾದ ಅರುಣ್ ಕುಮಾರ್ ಧರ್ಮಸ್ಥಳ ಇವರು ದೊರೆತಿರುವುದು ವಿದ್ಯಾರ್ಥಿಗಳ ಅದೃಷ್ಟ, ಅವರ ಗರಡಿಯಲ್ಲಿ ಪಳಗಿ ಉತ್ತಮ ಯಕ್ಷಗಾನ ಕಲಾವಿದರಾಗಿ ಎಂದು ಹಾರೈಸಿದರು .
ಯಕ್ಷಧ್ರುವ ಪಟ್ಲ ಪೌಂಡೇಶನ್, ಬೆಳ್ತಂಗಡಿ ಘಟಕದ ಸಂಚಾಲಕ ವಸಂತ ಶೆಟ್ಟಿ ಮಾತನಾಡಿ, ದಕ್ಷಿಣ ಕನ್ನಡದ ಗಂಡು ಕಲೆಯಾದ ಯಕ್ಷಗಾನವನ್ನು ಬಾಗಲಕೋಟೆ, ಹಾಸನ, ಚಿಕ್ಕಮಗಳೂರು, ಕೊಪ್ಪಳ, ಬೆಳಗಾಂ ಮುಂತಾದ ಜಿಲ್ಲೆಗಳಿಂದ ಬಂದಿರುವ ಎಲ್ಲಾ ವಿದ್ಯಾರ್ಥಿಗಳು ಕಲಿತು ರಾಜ್ಯಾದ್ಯಂತ ಪಸರಿಸಬೇಕೆಂದು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು ಶಾಲಾ ವಿದ್ಯಾರ್ಥಿ ಮಂತ್ರಿಮಂಡಲದ ಮುಖ್ಯಮಂತ್ರಿ ವೀರೇಶ್, ಯಕ್ಷ ಗುರು ಅರುಣ್ ಕುಮಾರ್ ಧರ್ಮಸ್ಥಳ, ನಿಲಯ ಮೇಲ್ವಿಚಾರಕ ರೋಹಿಣಿ ಆರ್. ಜಿ., ಶಾಲಾ ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲ ಮುರಳೀಧರ್ ಜಿ. ಎನ್. ಪ್ರಾಸ್ತವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಸಾತ್ವಿಕ್ ಹಾಗೂ ವಿದ್ಯಾಸಾಗರ್ ಪ್ರಾರ್ಥಿಸಿದರು. ಜನಿತ್ ಸ್ವಾಗತಿಸಿದರು. ವಿದ್ಯಾರ್ಥಿ ತನ್ವಿತ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ರಾಜು ವಂದನಾರ್ಪಣೆ ಮಾಡಿದರು.