Site icon Suddi Belthangady

ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಪದ್ಮುಂಜದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಪ್ರತಿಭಟನೆ

ಪದ್ಮುಂಜ: ಕಣಿಯೂರು ಗ್ರಾಮ ಪಂಚಾಯತಿ ಕಛೇರಿ ಮುಂದೆ ಕರ್ನಾಟಕ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ಕಣಿಯೂರು ಮತ್ತು ಉರುವಾಲು ಶಕ್ತಿ ಕೇಂದ್ರದ ವತಿಯಿಂದ ಜೂ. 23ರಂದು ಪ್ರತಿಭಟನೆ ನಡೆಯಿತು.

ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ ಸುಸೂತ್ರವಾಗಿ ಆಡಳಿತ ನಡೆಸದೆ ಭೂಮಾಫಿಯಾ ಪಟ್ಟಭದ್ದ ಹಿತಾಸಕ್ತಿಗಳಿಂದ ಜನರಿಗೆ ಸುಲಭ ರೀತಿಯ ಸೇವೆ ದೊರಕದೆ ಭ್ರಷ್ಟಾಚಾರದ ರೂಪದಲ್ಲಿ ಮುಳುಗಿ ಜನರಿಂದ ಹಣ ದೋಚಲು ಅವೈಜ್ಞಾನಿಕ ನಿಯಮಗಳನ್ನು ರೂಪಿಸಿ ಜನ ಸಾಮಾನ್ಯರಿಗೆ ಅಲೆದಾಡುವ ಭಾಗ್ಯ ಒದಗಿಸಿರುವುದನ್ನು ಭಾರತೀಯ ಜನತಾ ಪಾರ್ಟಿ ಕಣಿಯೂರು, ಉರುವಾಲು ಘಟಕದ ನಾಯಕರು ತೀವ್ರವಾಗಿ ಖಂಡಿಸಿದರು.

ಪಕ್ಷದ ಹಿರಿಯ ಕಾರ್ಯಕರ್ತೆ ಶಾರದಾ ಆರ್. ರೈ ಪ್ರಾಸ್ತಾವಿಕವಾಗಿ ಮಾತನಾಡಿ ಸರಕಾರದ ವತಿಯಿಂದ ಗ್ರಾಮಸ್ಥರಿಗೆ ಪಂಚಾಯತಿ ಮಟ್ಟದಿಂದಲೇ ಅನ್ಯಾಯವಾಗುತ್ತಿರುದರಿಂದ ಗ್ರಾಮ ಪಂಚಾಯತಿ ಮಟ್ಟದಿಂದಲೇ ಪ್ರತಿಭಟನೆ ಪ್ರಾರಂಭಿಸಿದ್ದೇವೆ ಎಂದರು.

ಪಂ. ಅಧ್ಯಕ್ಷ ಸೀತಾರಾಮ ಮಡಿವಾಳ ಮಾತನಾಡಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದಿನ ಸರಕಾರದ ಅವಧಿಯಲ್ಲಿ ದೊರೆಯುತ್ತಿದ್ದ ಆಶ್ರಯ ಮನೆ ಹಾಗೂ ವಿವಿಧ ಪಂಚನಿ ಯೋಜನೆಗಳು ಬಡ ಜನರಿಗೆ ದೊರೆಯುತ್ತಿಲ್ಲ.

ಗ್ರಾಮ ಪಂಚಾಯತಿಯಲ್ಲಿ ಸುಲಭವಾಗಿ ದೊರೆಯುತ್ತಿದ್ದ 9/11 ವ್ಯವಸ್ಥೆಯನ್ನು ಮೂಡಕ್ಕೆ ಹಾಕಿ ಜನರಿಗೆ ತನ್ನ ಸ್ವಂತ ಭೂಮಿಯಲ್ಲೂ ಮನೆ ನಿರ್ಮಾಣ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆಯಾಗದೆ ಗ್ರಾಮ ಮಟ್ಟದಲ್ಲಿ ರಸ್ತೆಗಳ ಚರಂಡಿ ದುರಸ್ತಿ ಪಡಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಬಿಜೆಪಿ ಕಣಿಯೂರು ಮಂಡಳ ಪ್ರಧಾನ ಕಾರ್ಯದರ್ಶಿ ಮಹೇಶ್ ಜೇಂಕ್ಯಾರ್ ಬಿಜೆಪಿ ಹಿರಿಯ ನಾಯಕ ವಿಜಯ ಕಳ್ಳಲಿಕೆ ಮಾತನಾಡಿ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿದರು. ಪದ್ಮುಂಜ ಸಿ ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ, ಹಾಲು ಉ. ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ, ಗ್ರಾಮ ಪಂ. ಮಾಜಿ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷೆ ಜಾನಕಿ ಸೇರಿದಂತೆ ಬಿಜೆಪಿ ಬೆಂಬಲಿತ ಪಂ. ಸದಸ್ಯರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

ಪಂ. ಕಾರ್ಯದರ್ಶಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಕಣಿಯೂರು ಮಂಡಳ ಶಕ್ತಿ ಕೇಂದ್ರದ ಅಧ್ಯಕ್ಷ ನ್ಯಾಯವಾದಿ ಯತೀಶ್ ಶೆಟ್ಟಿ ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.

Exit mobile version