Site icon Suddi Belthangady

ಕನಸುಗಾರರಾಗಿ ಸಮಯದ ಸದುಪಯೋಗ ಮಾಡಿಕೊಳ್ಳಬೇಕು: ಯಾಕೂಬ್ ಕೊಯ್ಯೂರು

ಬೆಳ್ತಂಗಡಿ: “ಸಾಧನೆ ಮಾಡಲು ಎಲ್ಲಾ ಮಕ್ಕಳಿಗೂ ಸಮಾನ ಅವಕಾಶವಿದೆ. ಕನಸುಗಾರರಾಗಿ ಸಮಯದ ಸದುಪಯೋಗ ಮಾಡಿಕೊಂಡರೆ ಯಶಸ್ಸು ನಮ್ಮ ಕೈಯಲ್ಲಿ ಇರುತ್ತದೆ” ಎಂದು ಸರಕಾರಿ ಪ್ರೌಢಶಾಲೆ ಕಾರ್ಯತಡ್ಕದ ಮುಖ್ಯೋಪಾಧ್ಯಾಯ ಯಾಕೂಬ್ ಕೊಯ್ಯೂರು ಅಭಿಪ್ರಾಯಪಟ್ಟರು. ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಜೂ.21ರಂದು ನಡೆದ 10ನೇ ತರಗತಿಯ ಪೋಷಕರ ಸಭೆಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.

ಶಾಲಾ ಮುಖ್ಯೋಪಾಧ್ಯಾಯ ಗುರು ಕ್ಲಿಫರ್ಡ್ ಪಿಂಟೋ ಕಳೆದ ಸತತ 10 ವರ್ಷಗಳಿಂದ ಶಾಲೆಯು ಶೇಕಡ 100 ಫಲಿತಾಂಶವನ್ನು ದಾಖಲಿಸಿರುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಈ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿಯಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯಲು ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ “ವಿದ್ಯಾರ್ಥಿಗಳು ಕಲಿಕೆಯಲ್ಲಿ ನಿರಂತರ ಪ್ರಯತ್ನ ಮಾಡಬೇಕು” ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕ ಗುರು ವೋಲ್ಟರ್ ಡಿ ಮೆಲ್ಲೋ “ದೃಢ ಸಂಕಲ್ಪ, ಸತತ ಪರಿಶ್ರಮ ಮತ್ತು ಆತ್ಮವಿಶ್ವಾಸದ ಫಲಿತಾಂಶವೇ ಸಾಧನೆ. ವಿದ್ಯಾರ್ಥಿಗಳು ಶಿಸ್ತು ಬದ್ಧ ಕಲಿಕೆಯನ್ನು ರೂಪಿಸಿಕೊಳ್ಳಬೇಕು” ಎಂದು ಹೇಳಿ ಆಶೀರ್ವದಿಸಿದರು.

ಸಹಶಿಕ್ಷಕಿ ಪಲ್ಲವಿ ಸಂಪನ್ಮೂಲ ವ್ಯಕ್ತಿಯ ಕಿರುಪರಿಚಯವನ್ನು ಮಾಡಿದರು. ಸಹಶಿಕ್ಷಕಿಯ ಪ್ರಭಾ ಸ್ವಾಗತಿಸಿದರು. ಸಹ ಶಿಕ್ಷಕಿ ಬ್ಲೆಂಡಿನ್ ರೋಡ್ರಿಗಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಸರಿತಾ ರೋಡ್ರಿಗಸ್ ವಂದಿಸಿದರು.

Exit mobile version