Site icon Suddi Belthangady

ಉಜಿರೆ: ಅಂತರಾಷ್ಟ್ರೀಯ ಯೋಗ ದಿನಾಚರಣೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ‘ಸೌಖ್ಯವನ’ ಪರೀಕದಲ್ಲಿ ಜೂ.21ರಂದು ಡಿ. ವೀರೇಂದ್ರ ಹೆಗ್ಗಡೆಯವರ ಶುಭಾರ್ಶೀವಾದಗಳೊಂದಿಗೆ, 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬೆಳಿಗ್ಗೆ ಘಂಟೆ 6ಕ್ಕೆ ಸರಿಯಾಗಿ 5ಕೆ ರನ್ ಕಾರ್ಯಕ್ರಮವನ್ನು ಸೌಖ್ಯವನದ ವತಿಯಿಂದ ಆಯೋಜಿಸಲಾಗಿತ್ತು. ಉಡುಪಿ ಜಿಲ್ಲಾ ಪೋಲೀಸ್ ಅಧೀಕ್ಷಕ ಹರಿರಾಂ ಶಂಕರ್ ಐಪಿಎಸ್ ಮ್ಯಾರಥಾನ್‌ಗೆ ಹಸಿರು ನಿಶಾನೆ ಮೂಲಕ ಚಾಲನೆ ನೀಡಿದರು.

ಸುಮಾರು 300 ಓಟಗಾರರು ಭಾಗವಹಿಸಿದ ಮ್ಯಾರಥಾನ್‌ನಲ್ಲಿ ವಿವಿಧ ವಯೋಮಿತಿ ವಿಭಾಗಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಘೋಷಿಸಲಾಯಿತು. ನಂತರ ಸೌಖ್ಯವನ ಕ್ಷೇಮ ಹಾಲ್‌ನಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಕೆ.ಎಂ.ಸಿ ಮಣಿಪಾಲದ ಖ್ಯಾತ ನರರೋಗ ಶಸ್ತ್ರಚಿಕಿತ್ಸಾ ತಜ್ಞ ವೈದ್ಯ ಡಾ. ಗಿರೀಶ್ ಮೆನನ್, ಮಣಿಪಾಲ ಪೋಲೀಸ್ ಠಾಣೆಯ ವೃತ್ತನಿರೀಕ್ಷಕ ಮಹೇಶ್
ಪ್ರಸಾದ್, ಕೆನರಾ ಬ್ಯಾಂಕ್ ಪರ್ಕಳ ಶಾಖೆಯ ಪ್ರಬಂಧಕ ಹರ್ಷ ಮುಖ್ಯ ಅಭ್ಯಾಗತರಾಗಿದ್ದರು. ಶಾಂತಿವನ ಟ್ರಸ್ಟ್ ಧರ್ಮಸ್ಥಳ ಇದರ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಸಭಾಧ್ಯಕ್ಷತೆಯನ್ನು ವಹಿಸಿದ್ದು ಹಾಗೂ ಮುಖ್ಯವೈದ್ಯಾಧಿಕಾರಿ ಗೋಪಾಲ ಪೂಜಾರಿ ಉಪಸ್ಥಿತರಿದ್ದರು.

ಪ್ರತಿಯೊಬ್ಬನು ತನ್ನ ಜೀವನದಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಂಡು ತನ್ನ ದೇಹದ ಸಮತೋಲನವನ್ನು ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದ್ದು, ಪ್ರಸ್ತುತ ಸಮಾಜದ ಸ್ಥಿತಿಗತಿಯಲ್ಲಿ ‘ಆರೋಗ್ಯವೇ ಭಾಗ್ಯ’ ಎಂಬ ಧ್ಯೇಯ ವಾಕ್ಯವನ್ನು ಪಾಲಿಸುವ ಮುಖೇನ ಎಲ್ಲರೂ ಸ್ವಸ್ಥ ಹಾಗೂ ಆರೋಗ್ಯ ಪೂರ್ಣ ಸಮಾಜವನ್ನು ನಿರ್ಮಿಸುವಲ್ಲಿ ಸಹಭಾಗಿಗಳಾಗಬೇಕೆಂದು ಮುಖ್ಯ ಅತಿಥಿ ಸ್ಥಾನದಿಂದ ಭಾಗವಹಿಸಿದ್ದ ಗಣ್ಯರು ತಮ್ಮ ನುಡಿಗಳಲ್ಲಿ ಬಣ್ಣಿಸಿದರು.ಮ್ಯಾರಥಾನ್‌ನಲ್ಲಿ ಬಹುಮಾನಗಳನ್ನು ಗಳಿಸಿದವರಿಗೆ ಮೆಡಲ್ ಹಾಗೂ ನಗದು ಬಹುಮಾನವನ್ನು ವಿತರಿಸಲಾಯಿತು.

ಯೋಗದಲ್ಲಿ ಸಾಧನೆ ಮಾಡಿ ತನ್ನ 73ರ ಇಳಿ ವಯಸ್ಸಿನಲ್ಲೂ ಸದೃಢವಾಗಿ ಸಕ್ರಿಯರಾಗಿರುವ ನೀಲಾವರ ದಮಯಂತಿ ಅವರನ್ನು ಸಮಾರಂಭದಲ್ಲಿ ‘ಸೌಖ್ಯ ಯೋಗ ಭಾಗ್ಯ’ ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಂತರಾಷ್ಟ್ರೀಯ ಖ್ಯಾತಿಯ ಹಾಡುಗಾರ್ತಿ ವಿಜಯಶ್ರೀ ಭಟ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ದೀಪ ಪ್ರಜ್ವಲನೆಗೊಂಡು, ಡಾ. ಶೋಭಿತ್ ಶೆಟ್ಟಿ ಪ್ರಸ್ತಾವಿಸಿ ಸ್ವಾಗತಿಸುವ ಮೂಲಕ
ಪ್ರಾರಂಭಗೊಂಡಿತು. ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿ ಹಾಗೂ ಪೂಜಾ ಜಿ. ಅವರು ವಂದನಾರ್ಪಣೆಗೈದರು.

Exit mobile version