ಬೆಳ್ತಂಗಡಿ:ಸಾಮಾಜಿಕ ಹೋರಾಟಗಾರ್ತಿ ಎಂದು ಹೇಳಿಕೊಳ್ಳುತ್ತಿದ್ದ ಸಂಧ್ಯಾ ಪವಿತ್ರ ನಾಗರಾಜ್ ರವರೇ ಮಡಂತ್ಯಾರ್ ನಿವಾಸಿ ರಾಜೇಶ್ ಎಂಬವರಿಗೆ ಮೋಸ ಮಾಡಿದ್ದಾರೆಂದು ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳ್ತಂಗಡಿ ಮಡಂತ್ಯಾರ್ ನಿವಾಸಿ ರಾಜೇಶ್ ಕೆ (43) ಎಂಬವರಿಗೆ 2024 ನೇ ಇಸವಿಯಲ್ಲಿ ಪೇಸ್ ಬುಕ್ ಸಾಮಾಜಿಕ ಜಾಲತಾಣದ ಮೂಲಕ ಸಂಧ್ಯಾ ಪವಿತ್ರ ನಾಗರಾಜ್ ಎಂಬಾಕೆಯ ಪರಿಚಯವಾಗಿ ನಂತರದ ದಿನಗಳಲ್ಲಿ ಆಕೆಯೊಂದಿಗೆ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದರು. ನಂತರ ಫೋನ್ ನಲ್ಲಿ ಮಾತಾಡುತ್ತಿದ್ದಾಗ ಸಂಧ್ಯಾ ಪವಿತ್ರ ನಾಗರಾಜ್ ತಾನು ನೊಂದವರಿಗೆ ಹಾಗೂ ವಂಚನೆಗೊಳಪಟ್ಟ ಅನೇಕರಿಗೆ ಸಹಾಯ ಮಾಡಿರುವುದಾಗಿ ತಿಳಿಸಿದ್ದು, ಈ ವೇಳೆ ರಾಜೇಶ್ ,ತನ್ನ ವಿರುದ್ದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಬಗ್ಗೆ ಆರೋಪಿತೆಗೆ ತಿಳಿಸಿ ಸಹಾಯ ಕೇಳಿದ್ದರು.
ಈ ಪ್ರಕರಣವನ್ನು ಬಗೆಹರಿಸಿಕೊಡುವುದಾಗಿ ನಂಬಿಸಿದ ಸಂಧ್ಯಾಪವಿತ್ರ ನಾಗರಾಜ್ ಆ ಬಳಿಕ ಪ್ರಕರಣ ಬಗೆಹರಿಸಲು ಸ್ವಲ್ಪ ಖರ್ಚು ಇದೆ ಎಂದು ಹೇಳಿ 2025 ನೇ ಫೆಬ್ರವರಿ- ಮೇ ತಿಂಗಳಿನಲ್ಲಿ ಹಂತ ಹಂತವಾಗಿ ಒಟ್ಟು ರೂ 3,20,000/- ಪಡೆದುಕೊಂಡಿರುತ್ತಾರೆ. ರಾಜೇಶ್ ರವರ ಪ್ರಕರಣವು ಬಗೆಹರಿಯದ ಹಿನ್ನೆಲೆಯಲ್ಲಿ ಆಕೆಯನ್ನು ಪ್ರಶ್ನಿಸಲು ಪ್ರಾರಂಭಿಸಿದಾಗ ಆಕೆ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದು, ಇದರಿಂದ ರಾಜೇಶ್ ಸಂಶಯಗೊಂಡು ಆಕೆಯ ಬಗ್ಗೆ ವಿಚಾರಿಸಿದಾಗ ತಾನು ಮೋಸ ಹೋಗಿರುವ ಅನುಮಾನ ಉಂಟಾಗಿದ್ದು,ಇದರಿಂದ ಕೂಡಲೇ ರಾಜೇಶ್ 20.06.2025 ರಂದು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದರು ಪೊಲೀಸರು ಠಾಣೆಯಲ್ಲಿ ಅ.ಕ್ರ 37/2025 ಕಲಂ: 318(4), 351(2) BNS-2023 ರಂತೆ ವಂಚನೆ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಫೇಸ್ ಬುಕ್ ಮೂಲಕ ಪರಿಚಯ:ಮಡಂತ್ಯಾರ್ ನಿವಾಸಿಗೆ ನೆರವಿನ ಭರವಸೆ ನೀಡಿ ಹಣ ಪೀಕಿಸಿದ ಆರೋಪ:ಸಂಧ್ಯಾ ಪವಿತ್ರ ನಾಗರಾಜ್ ಮೇಲೆ ಕೇಸ್
