Site icon Suddi Belthangady

ನಮ್ಮ ಧೈರ್ಯವೇ ಅಪ್ಪನ ಕೈ ಬೆರಳು – ಯುವರಾಜ್ ಜೈನ್ ಅಭಿಮತ

ಬೆಳ್ತಂಗಡಿ: ನಾವೆಲ್ಲಾ ಅಪ್ಪ ಎಂದರೆ ಪ್ರೀತಿ ಮಾಡುತ್ತೇವೆ. ನಮ್ಮ ಎಲ್ಲಾ ತಪ್ಪುಗಳನ್ನು ತಿದ್ದಿ ಸರಿದಾರಿಗೆ ತರುವ ಹೀರೋ ಅಪ್ಪ. ಅಮ್ಮನಿಂದ ಜೀವ ಲಭಿಸಿಸಿದರೆ, ಅಪ್ಪನಿಂದ ಜೀವನ ಲಭಿಸುತ್ತದೆ. ನಮ್ಮ ಧೈರ್ಯವೇ ಅಪ್ಪನ ಕೈ ಬೆರಳು. ಅಪ್ಪನ ಹೆಗಲ ಮೇಲೆ ಮಲಗಿದಾಗ ಆಗುವ ಆನಂದ ಮತ್ತೆಲ್ಲಿಯೂ ಸಿಗುವುದಿಲ್ಲ. ಅಪ್ಪ ನಮ್ಮ ಕಣ್ಣ ಮುಂದಿರುವ ನಿಜವಾದ ದೇವರು. ಅಪ್ಪನಿಂದ ಜೀವನದಲ್ಲಿ ಶಿಸ್ತು, ಬದುಕುವ ಕಲೆ ಎಲ್ಲವನ್ನೂ ಮಕ್ಕಳು ಕಲಿಯುತ್ತಾರೆ.ಎಂದು ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಹೇಳಿದರು. ಮೂಡಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ತಂದೆಗೆ ಗೌರ ಸಲ್ಲಿಸುವ ವಿನೂತನ “ಪಿತೃ ದೇವೋಭವ” ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಪ್ಪ ಬದುಕಿನುದ್ದಕ್ಕೂ ಜೀವನದ ಪಾಠವನ್ನು ಹೇಳಿ ಕೊಡುವ ಶಿಕ್ಷಕ. ಅಂತಹ ಅಪ್ಪನಿಗೆ ನಾವು ದಿನಂಪ್ರತಿ ಗೌರವಿಸಬೇಕು. ಅಪ್ಪ ಎಂಬುದೇ ಒಂದು ಅದ್ವಿತೀಯ ಸಂಬಂಧ. ಅವನ ಪ್ರೀತಿ, ಅವನ ಮಾರ್ಗದರ್ಶನ, ಆತನ ಮೌಲ್ಯ, ಅವನ ತ್ಯಾಗ ಅವಿರತ. ತಂದೆಯು ಕುಟುಂಬದ ಅಧಾರಸ್ತಂಭ. ನಮಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಅಪ್ಪ ಮಾಡುತ್ತಾರೆ. ನಮಗೆ ಶಕ್ತಿ ಮತ್ತು ಭದ್ರತೆಯನ್ನು ಒದಗಿಸುತ್ತಾರೆ. ಅಪ್ಪನ ಪಾದ ಮುಟ್ಟಿ ನಮಸ್ಕಾರ ಮಾಡಿದಾಗ, ಅಪ್ಪನ ಕಾಲಿನ ಧೂಳು ನಿಮ್ಮ ಹಣೆಗೆ ಅಂಟಿದಾಗ ನಿಮ್ಮ ಹಣೆಬರಹವೇ ಬದಲಾಗುತ್ತದೆ. ತಂದೆಯು ನಮಗಾಗಿ ಮಾಡಿರುವ ಎಲ್ಲಾ ತ್ಯಾಗಗಳು ಮತ್ತು ಶ್ರಮಗಳು ನಮ್ಮ ಜೀವನವನ್ನು ಸುಂದರಗೊಳಿಸಿವೆ. ತಂದೆಯ ಹಾದಿಯಲ್ಲೇ ನಾವು ಶಿಸ್ತು, ಧೈರ್ಯ, ಸಹನೆ ಮತ್ತು ಮೌಲ್ಯಗಳು ಎಲ್ಲವನ್ನು ಕಲಿತು ಅವರಿಗೆ ಗೌರವವನ್ನು ಸಲ್ಲಿಸಬೇಕಾಗಿರುವುದು ನಮ್ಮ ಕರ್ತವ್ಯ. ನಮ್ಮ ಭವಿಷ್ಯದ ಆಕರ ಮತ್ತು ಶಕ್ತಿಯಾಗಿರುವ ಅಪ್ಪನ ಅಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಮಾತನಾಡಿ, ತಂದೆಯೇ ನನಗೆ ದೇವರು. ತಂದೆಯೇ ನನ್ನ ಖುಷಿ, ಸಂತಸ ಎಲ್ಲವೂ ಆಗಿದ್ದಾರೆ. ಅವರ ಮಮತೆ, ಮಾರ್ಗದರ್ಶನ ಮತ್ತು ತಾಳ್ಮೆ ನನ್ನ ಜೀವನವನ್ನು ಬೆಳಗಿಸುತ್ತಿವೆ. ಅವರು ಬೋಧಿಸಿದ ಪ್ರತೀ ಪಾಠ, ತೋರಿಸಿದ ಪ್ರತೀ ದಾರಿಯಲ್ಲಿ ನಾ ನನ್ನ ಕನಸುಗಳನ್ನು ಸಾಕಾರಗೊಳಿಸಿಕೊಂಡು ಸಾಗುತ್ತಿzನೆ. ನನ್ನ ಕನಸುಗಳಿಗೆ ಚೆನ್ನಾಗಿ ನಿಂತು ನಾ ಓಡಿದಾಗ ಹಿಂದೆಯೇ ಓಡಿ ನೀಡಿದ ಆಶೀರ್ವಾದಗಳ ನೆರಳನ್ನು ನಾನು ಇಂದಿಗೂ ಅನುಭವಿಸುತ್ತಿದ್ದೇನೆ. ತಂದೆ ಮಕ್ಕಳ ನಡುವಿನ ಪ್ರೀತಿ, ಒಲುಮೆ, ಭಾಂದವ್ಯ ಎಂದಿಗೂ ಮರೆಯಲಾಗದು. ಮಕ್ಕಳಾದ ನಾವು ನಮ್ಮ ತಂದೆಯ ನೋವು-ನಲಿವುಗಳೆಲ್ಲವೂ ತಿಳಿದಿರಬೇಕು. ಅವರ ಪ್ರತೀ ಹೆಜ್ಜೆಯಲ್ಲಿಯೂ ನಾವೂ ಅವರ ಜೊತೆಯಾಗಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳ ತಂದೆ ಹಾಗೂ ಟ್ರಸ್ಟಿಯೂ ಆಗಿರುವ ಕೆ.ರಾಜರತ್ನ ಜೈನ್ ಮಾತನಾಡಿ ನನ್ನ ಮಗಳ ಯಶಸ್ಸಿನಲ್ಲಿ ನನಗೆ ಹೆಮ್ಮೆ ಇದೆ. ಇಂದು ಅತ್ಯುತ್ತಮವಾದ ಜೀವನವನ್ನು ರೂಪಿಸಿಕೊಂಡು ನನ್ನ ಮುಂದಿರುವುದು ನನಗೆ ಅತ್ಯಂತ ಸಂತೋಷವಾಗಿದೆ. ಮಕ್ಕಳು ಎಷ್ಟೇ ಎತ್ತರಕ್ಕೆ ಬೆಳೆದರೂ, ಅವರೊಂದಿಗೆ ಇರುವುದು ನಮ್ಮ ಕರ್ತವ್ಯವಾಗಿದೆ. ಮಕ್ಕಳ ಬೆಳವಣಿಗೆಯೇ ನನಗೆ ಅತ್ಯುತ್ತಮ ಗೌರವ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳು ಮತ್ತು ಅಧ್ಯಕ್ಷರು ಇವರ ಪಾದಪೂಜೆ ಮಾಡಿ ಗೌರವಿಸಿ ಸನ್ಮಾನಿಸಿದರು.
ಸಂಸ್ಥೆಯ ವಿದ್ಯಾರ್ಥಿಗಳ ಅಪ್ಪಂದಿರು ಮಾತನಾಡಿ, ತಂದೆಯ ಪ್ರೀತಿ, ವಾತ್ಸಲ್ಯದಿಂದ ನಮ್ಮ ಬದುಕನ್ನು ಕಟ್ಟಿಕೊಳ್ಳುತ್ತೇವೆ. ಆದ್ದರಿಂದ ಪ್ರತಿಯೊಬ್ಬರು ತಂದೆಯನ್ನು ಸದಾ ಗೌರವ ಭಾವದಿಂದ ಕಾಣಬೇಕು ಎಂದು ಹೇಳಿದರು.

ಈ “ಪಿತೃದೇವೋಭವ” ಎಂಬ ವಿನೂತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಅಪ್ಪಂದಿರ ಪಾದ ಪೂಜೆ ಮಾಡಿ ತಂದೆ ಮಕ್ಕಳ ಬಾಂಧವ್ಯಕ್ಕೆ ಕಾರಣರಾದರು.
ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ. ಬಿ.ಪಿ. ಸಂಪತ್ ಕುಮಾರ್, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಉಪ ಮುಖ್ಯೋಪಾಧ್ಯಾಯ ಜಯಶೀಲ, ಕಾರ್ಕಳದ ಸೂಪರ್ ಮಾರ್ಕೆಟ್‌ನ ಮಾಲಿಕರಾದ ರೂಪೇಶ್ ಉಪಸ್ಥಿತರಿದ್ದರು. ನಂತರದಲ್ಲಿ ತಂದೆಯ ಮಹತ್ವವನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿದ್ಯಾರ್ಥಿಗಳಾದ ಧನುಷ್ ನಿರೂಪಿಸಿದರು. ಸಾನ್ವಿ ಸ್ವಾಗತಿಸಿದರು. ವರುಣ್ ವಂದಿಸಿದರು.

Exit mobile version