ಉಜಿರೆ: ಶ್ರೀ ಧ.ಮಂ.ಅ.ಸೆಕೆಂಡರಿ ಶಾಲೆಯಲ್ಲಿ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಭಾರತೀಯ ಡೆಂಟಲ್ ಅಸೋಸಿಯೇಷನ್ ನ ಪುತ್ತೂರು ಶಾಖೆಯ ಅಧ್ಯಕ್ಷೆ ಡಾ| ಆಶಾ ರಾಘವೇಂದ್ರ ಪಿದಮಲೆ ಅವರು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಯೋಗವು ಮನಸ್ಸಿಗೆ ಆನಂದ ನೀಡುತ್ತದೆ, ಕೋಪವನ್ನು ನಿಯಂತ್ರಿಸುತ್ತದೆ. ತಾಳ್ಮೆ ಎನ್ನುವ ಜೀವನಪಾಠವನ್ನು ಕಲಿಸುತ್ತದೆ ಎಂದರು.
ಮುಖ್ಯ ಅತಿಥಿ, ಉಜಿರೆಯ ಎಸ್.ಡಿ.ಎಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ ಪ್ರಾಧ್ಯಾಪಕ ಪ್ರಣವ್ ಪಿ.ಪಿ. ಮಾತನಾಡಿ, ಯೋಗವು ಮಾನಸಿಕವಾಗಿ ದೈಹಿಕವಾಗಿ ಪರಿಣಾಮ ಬೀರುತ್ತದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅಸ್ತಮಾ ಮುಂತಾದ ಸಮಸ್ಯೆಗಳನ್ನು ಯೋಗದಿಂದ ಗುಣಪಡಿಸಬಹುದು. ಕೋವಿಡ್ ಸಂದರ್ಭದಲ್ಲಿ ಯೋಗ ಉಪಯೋಗವಾಗಿದೆ ಎಂದರು. ಯೋಗದ ಒಂದು ಶುದ್ಧೀಕರಣ ವ್ಯಾಯಾಮವಾದ ನೌಲಿ ಕ್ರಿಯೆಯ ಪ್ರಾತ್ಯಕ್ಷಿಕೆಯನ್ನು ಅವರು ಮಾಡಿ ತೋರಿಸಿದರು. ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಶಿಕ್ಷಣ ಸಂಯೋಜಕ ಶಶಿಶೇಖರ್ ಎನ್. ಕಾಕತ್ಕರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯಕುಮಾರ್, ಯೋಗ ತರಬೇತುದಾರರು, ಎಸ್.ಡಿ.ಎಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಕ್ಷಮಾ ಮತ್ತು ಅಮೃತವರ್ಷಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಸುರೇಶ್ ಕೆ. ಸ್ವಾಗತಿಸಿದರು. ಸಂಸ್ಕೃತ ಅಧ್ಯಾಪಕಿ ಭಾಗ್ಯಲಕ್ಷ್ಮೀ ಅತಿಥಿ ಪರಿಚಯ ನೀಡಿದರು. 8ನೇ ತರಗತಿ ವಿದ್ಯಾಥಿನಿಯರು ಪ್ರಾರ್ಥನೆ ನೆರವೇರಿಸಿದರು.ಷ ಜ್ಞಾನೇಶ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮ ಸಂಘಟಕ, ದೈಹಿಕ ಶಿಕ್ಷಣ ಶಿಕ್ಷಕ ಪರಮೇಶ್ವರ್ ವಂದಿಸಿದರು.