ಬೆಳ್ತಂಗಡಿ: ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕಕಾರಂದೂರು ಗ್ರಾಮದ ಕಾಪಿನಡ್ಕದ ಓಡದಕರಿಯ ಎಂಬಲ್ಲಿ ವ್ಯಕ್ತಿಯೊಬ್ಬರು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.17ರಂದು ನಡೆದ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಧರ್ಣಪ್ಪ ಕನಡ (64)ಎಂಬವರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದು ತನ್ನ ಪತಿ ಧರ್ಣಪ್ಪ ಕನಡ ಅವರು ವಿಪರೀತ ಮದ್ಯ ಸೇವಿಸುವ ಚಟ ಹೊಂದಿದ್ದು ಜೂನ್ 17ರಂದು ಸಂಜೆ ೪ಗಂಟೆಯ ಸುಮಾರಿಗೆ ವಿಪರೀತ ಶರಾಬು ಸೇವಿಸಿ ಮನೆಗೆ ಬಂದು ಗಲಾಟೆ ಮಾಡಿ ನನ್ನನ್ನು ಮನೆಯಿಂದ ಹೊರಹಾಕಿ ಬೀಗ ಹಾಕಿಕೊಂಡಿದ್ದಾರೆ.ಸಂಜೆಯ ವೇಳೆ ಮಗಳು ಕೆಲಸದಿಂದ ಬಂದು ನೋಡಿದಾಗ ಮನೆಯ ಬೆಡ್ ರೂಂನ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ವೇಣೂರು ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಮೃತರು ಪತ್ನಿ ಶಾಲಿನಿ, ಮಕ್ಕಳಾದ ರಜನಿ, ಲೋಕೇಶ್, ಶೋಭಾ, ಆನಂದ್, ದರ್ಶನ್ ಮತ್ತು ಸವಿತಾ ಅವರನ್ನು ಅಗಲಿದ್ದಾರೆ.