Site icon Suddi Belthangady

ಸಣ್ಣ ವಯಸ್ಸಿನಲ್ಲಿ ಕಲಿತ ವಿದ್ಯೆ ಕಷ್ಟಕಾಲಕ್ಕೆ ಉಪಯುಕ್ತ: ಡಾ. ಶ್ರೀಧರ ಭಟ್

ಬೆಳ್ತಂಗಡಿ: ಸಣ್ಣ ವಯಸ್ಸಿನಲ್ಲಿ ಕಲಿತ ವಿದ್ಯೆ, ಸಂಸ್ಕಾರವು ದೊಡ್ಡವರಾದಾಗ ಜೀವನದಲ್ಲಿ ಎದುರಿಸುವ ಸಂಕಷ್ಟಗಳಿಗೆ ಉತ್ತರಿಸಲು ಸಹಾಯಕವಾಗುತ್ತದೆ. ಆದುದರಿಂದಲೇ ಮಕ್ಕಳಿಗೆ ಒಳ್ಳೆಯ ವಿದ್ಯೆ ಮತ್ತು ಸಂಸ್ಕಾರದ ಅಗತ್ಯವಿದೆ. ಆಧುನಿಕ ಶಿಕ್ಷಣದ ಪದ್ಧತಿಯಲ್ಲಿ ಸಂಸ್ಕಾರಯುತ ನೈತಿಕ ಶಿಕ್ಷಣದ ಕೊರತೆಯಿಂದ ಸಮಾಜದಲ್ಲಿ ಕೌಟುಂಬಿಕ ಸ್ವಾಸ್ಥ್ಯವೂ ಕೆಡುತ್ತಿದೆ.” ಎಂದು ಎಸ್. ಡಿ. ಎಮ್ ಪದವಿ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ. ಶ್ರೀಧರ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇವರು ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ ವತಿಯಿಂದ ಗೇರುಕಟ್ಟೆಯ ಪ್ರೊ. ಮಧೂರು ಮೋಹನ ಕಲ್ಲೂರಾಯರ ವಿಷ್ಣು ಪದ್ಮ ನಿವಾಸದಲ್ಲಿ ಇತ್ತೀಚೆಗೆ ನಡೆದ 20ನೇ ಮನೆ ಮನೆ ಗಮಕ ಕಾರ್ಯಕ್ರಮದಲ್ಲಿ ವ್ಯಾಖ್ಯಾನಕಾರರಾಗಿ ಪಾಲ್ಗೊಂಡು ಮಾತನಾಡಿದರು. ಕೌಶಿಕ ರಾಮಾಯಣದ ಸೀತಾ ಕಲ್ಯಾಣ ಕಾವ್ಯ ಭಾಗವನ್ನು ಸಂಗೀತ ವಿದ್ವಾನ್ ಎ.ಡಿ. ಸುರೇಶ್ ಸುಮಧುರ ಕಂಠದಿಂದ ವಾಚಿಸಿದರು.

ಎಲ್ಲರ ಮನೆಗಳಲ್ಲಿಯೂ ಗಮಕದಂತಹ ಕಾರ್ಯಕ್ರಮಗಳು ನಡೆದು ಸಾಂಸ್ಕೃತಿಕ ವಾತಾವರಣ ಉಳಿಯಬೇಕು. ಪರಿಷತ್ತಿನ ಕಾರ್ಯಗಳಿಗೆ ಸರ್ವರೂ ಸಹಕರಿಸಬೇಕು. ಎಂದು ಹಿರಿಯ ಮುತ್ಸದ್ದಿಗಳಾದ ಬಿ. ಭುಜಬಲಿ ಅಭಿಪ್ರಾಯ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ಡಾ. ದಿವಾ ಕೊಕ್ಕಡ, ಅಭಾಸಾಪ ತಾಲೂಕು ಕಾರ್ಯದರ್ಶಿ ಸುಭಾಷಿಣಿ, ವೇದಮೂರ್ತಿ ರಾಘವೇಂದ್ರ ಭಾಂಗಿಣ್ಣಾಯ ಕುಂಟಿನಿ, ತಾಲೂಕು ಗಮಕ ಕಲಾ ಪರಿಷತ್ತಿನ ಖಜಾಂಚಿ ಸುವರ್ಣ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಘಟಿಸಿದ ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ ನಿರೂಪಿಸಿ, ವಂದಿಸಿದರು.

Exit mobile version