ಪದ್ಮುಂಜ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ ಹಾಗೂ ಪೋಷಕರ ಸಭೆ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಗೌಡ ಅಧ್ಯಕ್ಷತೆಯಲ್ಲಿ ಜೂ.14ರಂದು ನಡೆಯಿತು.
ಶಾಲೆಯ ಹಳೇ ವಿದ್ಯಾರ್ಥಿ ಹಾಗೂ ದಾನಿಗಳಾದ ಸದಾಶಿವ ಶೆಟ್ಟಿಯವರು 135 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಒಂದನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ ಕೊಡೆ ಚೀಲಗಳನ್ನು ಉಚಿತವಾಗಿ ನೀಡಿದರು. ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ ಮಡಿವಾಳ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ನಮ್ಮ ಶಾಲೆಗೆ ಶಾಸಕರ ವತಿಯಿಂದ ಎರಡು ಲಕ್ಷ ಹಣ ಮಂಜೂರು ಮಾಡಿ ಪೈಂಟಿಂಗ್ ಕೆಲಸ ನಿರ್ವಹಿಸಲಾಗಿದೆ. ಈ ಶಾಲೆಗೆ ನಮ್ಮ ಸಹಕಾರ ಯಾವಾಗಲೂ ಇದ್ದೇ ಇದೆ ಎಂದರು.
ಎಸ್. ಡಿ. ಎಂ. ಸಿ ಅಧ್ಯಕ್ಷ ಪುರುಷೋತ್ತಮ ಗೌಡ, ಉಪಾಧ್ಯಕ್ಷೆ ಗೀತಾ ಶೆಟ್ಟಿ, ಸದಸ್ಯ ಕಾಸಿಂ ಪದ್ಮುಂಜ ಮಾತನಾಡಿ ಶುಭ ಹಾರೈಸಿದರು. ಆಶಾ ಕಾರ್ಯಕರ್ತೆ ಶಾಲಿನಿ ಆರೋಗ್ಯ ಬಗ್ಗೆ ಮಾಹಿತಿ ನೀಡಿದರು. ಇತ್ತೀಚೆಗೆ ಅಹ್ಮದಾಬಾದ್ ನಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಆತ್ಮಕ್ಕೆ ಚಿರ ಶಾಂತಿಗಾಗಿ ಮೌನ ಪ್ರಾರ್ಥನೆ ನಡೆಸಲಾಯಿತು. ಅಥಿತಿ ಶಿಕ್ಷಕಿ ನಳಿನಿ ಸ್ವಾಗತಿಸಿದರು. ಅಧ್ಯಾಪಕಿ ತೇಜಾ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ಕೀರ್ತಿ ಪ್ರಾಸ್ತಾವಿಕ ಭಾಷಣ ಮಾಡಿ ಧನ್ಯವಾದ ಸಲ್ಲಿಸಿದರು.