Site icon Suddi Belthangady

ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಎನ್‌ಐಎಗೆ: ಕೇಂದ್ರ ಗೃಹ ಸಚಿವಾಲಯ ಆದೇಶ

ಬೆಳ್ತಂಗಡಿ: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಜ್ಪೆಯಲ್ಲಿ ನಡೆದಿದ್ದ ಹಿಂದೂಪರ ಸಂಘಟನೆ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಜೂ.೮ರಂದು ಆದೇಶ ನೀಡಿದೆ.

ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಪದವು ಕ್ರಾಸ್ ಬಳಿ ಮೇ. ೧ರಂದು ರಾತ್ರಿ ದುಷ್ಕರ್ಮಿಗಳ ತಂಡವೊಂದು ಸುಹಾಸ್ ಶೆಟ್ಟಿಯವರ ಕಾರನ್ನು ಅಡ್ಡಗಟ್ಟಿ ನಡುರಸ್ತೆಯಲ್ಲೇ ಮಾರಕಾಯುಧಗಳಿಂದ ಕೊಚ್ಚಿ ಹಾಕಿ ಪರಾರಿಯಾಗಿತ್ತು. ಗಂಭೀರ ಗಾಯಗೊಂಡಿದ್ದ ಸುಹಾಸ್ ಶೆಟ್ಟಿಯವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿಗೆ ಕಾರಣವಾಗಿದ್ದ ಈ ಪ್ರಕರಣದ ತನಿಖೆ ನಡೆಸಿದ ಬಜ್ಪೆ ಠಾಣಾ ಪೊಲೀಸರು ಮತ್ತು ಮಂಗಳೂರು ಸಿಸಿಬಿ ಪೊಲೀಸರು ಆರೋಪಿ ಸಫ್ವಾನ್ ಸೇರಿದಂತೆ ೧೨ ಮಂದಿಯನ್ನು ಬಂಧಿಸಿದ್ದರು. ಈ ಮಧ್ಯೆ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳು ಆಗ್ರಹಿಸಿದ್ದವು. ರಾಜ್ಯ ಬಿಜೆಪಿ ನಾಯಕರ ನಿಯೋಗ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿತ್ತು. ಅಲ್ಲದೆ ಈ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿ ಬಜ್ಪೆಯಲ್ಲಿ ಜನಾಗ್ರಹ ಸಮಾವೇಶ ನಡೆದಿತ್ತು. ಇದೀಗ ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಲು ಕೇಂದ್ರ ಗೃಹ ಸಚಿವಾಲಯದಿಂದ ಆದೇಶವಾಗಿದೆ.

ಈ ಪ್ರಕರಣ ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆ ೨೦೦೮ರ ಅಡಿಯಲ್ಲಿ ಅನುಸೂಚಿತ ಅಪರಾಧವಾಗಿದೆ ಎಂಬ ಅಭಿಪ್ರಾಯವನ್ನು ಕೇಂದ್ರ ಸರಕಾರ ವ್ಯಕ್ತಪಡಿಸಿದೆ. ಪ್ರಕರಣದ ತೀವ್ರತೆ, ರಾಷ್ಟ್ರೀಯ ಪರಿಣಾಮಗಳು ಹಾಗೂ ವಿಸ್ತತವಾಗಿ ನಡೆಯುತ್ತಿರುವ ಸಂಚನ್ನು ಅನಾವರಣಗೊಳಿಸುವ ಅಗತ್ಯತೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ತನಿಖೆ ವಹಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆಯ ಸಿಟಿಸಿಆರ್ ವಿಭಾಗದ ಅಧೀನ ಕಾರ್ಯದರ್ಶಿ ರಾಜೀವ್ ಕುಮಾರ್ ಅವರು ನೀಡಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಎನ್‌ಐಎ ತನಿಖೆಗೆ ಒತ್ತಾಯಿಸಿದ್ದ ಬಿಜೆಪಿ, ಸಂಘ ಪರಿವಾರ: ಪ್ರಕರಣ ಹಿಂದೆ ದೊಡ್ಡ ಜಾಲವೇ ಇದ್ದು, ಇದಕ್ಕೆ ವಿದೇಶಿ ಫಂಡ್ ಬಳಸಲಾಗಿದೆ. ಭಯೋತ್ಪಾದಕ ಸಂಘಟನೆಗಳು ಕೈಜೋಡಿಸಿದೆ. ಈ ಹಿನ್ನೆಲೆಯಲ್ಲಿ ಇಡೀ ಪ್ರಕರಣದ ತನಿಖೆಯ ನ್ನು ಎನ್‌ಐಎಗೆ ವಹಿಸಬೇಕೆಂದು ರಾಜ್ಯ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಒತ್ತಾಯಿಸಿದ್ದವು. ಮೇ. ೨ರಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಈ ಪ್ರಕರಣವನ್ನು ತಕ್ಷಣವೇ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಬೇಕೆಂದು ಒತ್ತಾಯಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದರು. ಈ ಘಟನೆಯು ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಹೆಚ್ಚುತ್ತಿರುವ ಕಾನೂನು ಬಾಹಿರ ಚಟುವಟಿಕೆ, ಬಲಗೊಳ್ಳುತ್ತಿರುವ ಇಸ್ಲಾಮಿಕ್ ಮೂಲಭೂತವಾದ ಮತ್ತು ರಾಷ್ಟ್ರ ವಿರೋಧಿ ಶಕ್ತಿಗಳ ಅಟ್ಟಹಾಸಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಸುಹಾಸ್ ಶೆಟ್ಟಿ ಹತ್ಯೆ ಕರಾವಳಿ ಮಾತ್ರವಲ್ಲದೆ ಪೂರ್ತಿ ರಾಜ್ಯದ ಜನರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.

ಸುಹಾಸ್ ಶೆಟ್ಟಿ ಹತ್ಯೆ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯ ಪ್ರವೇಶಿಸಿ ಕೇವಲ ಅಪರಾಧಿಗಳು ಮಾತ್ರವಲ್ಲದೆ ಅವರಿಗೆ ಬೆಂಬಲ ನೀಡಿದ ಮತ್ತು ಹಣಕಾಸು ನೆರವು ನೀಡಿದವರೆಲ್ಲರನ್ನು ತುರ್ತಾಗಿ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಸಕ ಸುನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ವಿಶ್ವಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರು ಪ್ರಕರಣ ಎನ್‌ಐಎಗೆ ವಹಿಸುವಂತೆ ಒತ್ತಾಯಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಗೃಹ ಇಲಾಖೆ ತನಿಖೆಯನ್ನು ಎನ್‌ಐಎಗೆ ವಹಿಸಿ ಆದೇಶಿಸಿದೆ.

ಈಗಾಗಲೇ ೧೨ ಮಂದಿ ಬಂಧನವಾಗಿದೆ: ಸುರತ್ಕಲ್‌ನಲ್ಲಿ ೨೦೨೨ರ ಜುಲೈ ೨೬ರಂದು ನಡೆದ ಮೊಹಮ್ಮದ್ ಫಾಝಿಲ್ ಕೊಲೆ ಪ್ರಕರಣದ ಆರೋಪಿಯಾಗಿದ್ದು ರೌಡಿಶೀಟರ್ ಆಗಿದ್ದ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾರಿಂಜ ನಿವಾಸಿ ಸುಹಾಸ್ ಶೆಟ್ಟಿ ಅವರನ್ನು ತಂಡವೊಂದು ಬೆನ್ನಟ್ಟಿ ಭೀಭತ್ಸವಾಗಿ ಕೊಲೆಗೈದಿತ್ತು. ದುಷ್ಕರ್ಮಿಗಳು ನಡೆಸಿದ ಈ ಕೃತ್ಯವನ್ನು ಘಟನೆ ನಡೆದ ಎದುರು ಭಾಗದ ಕಟ್ಟಡದಿಂದ ಯಾರೋ ವಿಡಿಯೊ ಮಾಡಿದ್ದು, ಇದು ಕೆಲವೇ ಕ್ಷಣದಲ್ಲಿ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆ ಖಂಡಿಸಿ ಮೇ ೨ರಂದು ವಿಶ್ವಹಿಂದೂ ಪರಿಷತ್ ಸಹಿತ ಹಿಂದೂ ಸಂಘಟನೆಗಳು ದ.ಕ. ಜಿಲ್ಲಾ ಬಂದ್‌ಗೆ ಕರೆ ನೀಡಿದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮಂಗಳೂರು ನಗರ ಪೊಲೀಸ್ ಅಧಿಕಾರಿಗಳು ತನಿಖೆಗೆ ೫ ವಿಶೇಷ ತಂಡ ರಚಿಸಿ ಮೇ ೩ರಂದು ಬಜಪೆ ಶಾಂತಿಗುಡ್ಡೆ ನಿವಾಸಿಗಳಾದ ಅಬ್ದುಲ್ ಸಫ್ವಾನ್ (೨೯), ನಿಯಾಜ್ (೨೮), ಕೆಂಜಾರು ಬಜಪೆ ನಿವಾಸಿ ಮೊಹಮ್ಮದ್ ಮುಝಮಿಲ್ (೩೨), ಕಳವಾರು ಕುರ್ಸುಗುಡ್ಡೆ ನಿವಾಸಿ ಕಲಂದರ್ ಶಾ (೩೧), ಚಿಕ್ಕಮಗಳೂರು ರುದ್ರಪಾದ ಕಳಸ ನಿವಾಸಿ ರಂಜಿತ್ (೧೯), ಕಳಸಕೋಟೆ ಮಾವಿನಕೆರೆ ನಿವಾಸಿ ನಾಗರಾಜ್ (೨೦), ಜೋಕಟ್ಟೆ ಈದ್ಗಾ ಮಸೀದಿ ಸಮೀಪ ನಿವಾಸಿ ಮೊಹಮ್ಮದ್ ರಿಜ್ವಾನ್ (೨೮), ಆದಿಲ್ ಮೆಹರೂಫ್ (೨೪) ಸೇರಿದಂತೆ ೮ ಮಂದಿಯನ್ನು ಬಂಧಿಸಿತ್ತು. ಮೇ ೧೪ರಂದು ಕಳುವಾರು ಆಶ್ರಯ ಕಾಲೋನಿ ನಿವಾಸಿ ಅಜರುದ್ದೀನ್ (೨೯), ಕಾವು ಬೆಳಪು ಬದ್ರಿಯಾ ನಗರದ ನಿವಾಸಿಯಾಗಿದ್ದು ಪ್ರಸ್ತುತ ಬಜಪೆ ನಿವಾಸಿಯಾಗಿರುವ ಅಬ್ದುಲ್ ಖಾದರ್ (೨೪), ಬಂಟ್ವಾಳ ಫರಂಗಿಪೇಟೆಯ ನಿವಾಸಿಯಾಗಿದ್ದು ಪ್ರಸ್ತುತ ಹಾಸನ ಕೆ. ಆರ್.ಪುರಂನಲ್ಲಿ ವಾಸವಾಗಿದ್ದ ನೌಷಾದ್ (೩೯) ಎಂಬವರನ್ನು ಬಂಧಿಸಿತ್ತು. ತನಿಖೆಗೆ ಸಹಕಾರ ನೀಡಿದ ಆರೋಪದಲ್ಲಿ ಜೂ.೩ರಂದು ಅಬ್ದುಲ್ ರಜಾಕ್ (೫೯) ಎಂಬಾತನ ಬಂಧನ ಮೂಲಕ ಪ್ರಕರಣದಲ್ಲಿ ಒಟ್ಟು ೧೨ ಮಂದಿಯನ್ನು ಬಂಧಿಸಲಾಗಿತ್ತು.

೩ ವರ್ಷದಲ್ಲಿ ೨ನೇ ಪ್ರಕರಣ ಎನ್‌ಐಎಗೆ: ಕರಾವಳಿ ಜಿಲ್ಲೆಯಲ್ಲಿ ಕೇವಲ ೩ ವರ್ಷಗಳ ಅಂತರದಲ್ಲಿ ನಡೆದ ೨ ಕೊಲೆ ಪ್ರಕರಣಗಳು ಇದೀಗ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತೆಕ್ಕೆಗೆ ವಹಿಸಿರುವುದು ಭಾರೀ ಸಂಚಲನಕ್ಕೆ ಕಾರಣವಾಗಿದೆ. ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ೨೦೨೨ರ ಜು.೨೬ರಂದು ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳ ತಂಡ ಬರ್ಬರವಾಗಿ ಕೊಲೆ ಮಾಡಿತ್ತು. ಈ ಪ್ರಕರಣ ರಾಜ್ಯಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು. ಆಡಳಿತ ಪಕ್ಷದ ವಿರುದ್ಧವೇ ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಪ್ರಕರಣದ ಹಿಂದೆ ಜೆಹಾದಿ ಸಂಘಟನೆಗಳಿದ್ದು ಇದರ ತನಿಖೆಯನ್ನು ಎನ್‌ಐಎಗೆ ವಹಿಸಬೇಕೆಂದು ಒತ್ತಾಯ ಕೇಳಿ ಬಂದಿತ್ತು. ರಾಜ್ಯ ಸರಕಾರದ ವಿರುದ್ಧವೇ ಎಲ್ಲೆಡೆ ಪ್ರತಿಭಟನೆ, ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಅಂದಿನ ರಾಜ್ಯ ಬಿಜೆಪಿ ಸರಕಾರ ಈ ಪ್ರಕರಣವನ್ನು ಎನ್‌ಐಎಗೆ ವಹಿಸಿತ್ತು. ಕೊಡಗು, ಮೈಸೂರು, ಸೋಮವಾರಪೇಟೆ, ದಕ್ಷಿಣ ಕನ್ನಡ ಹಾಗೂ ತಮಿಳುನಾಡಿನ ಕೆಲವು ಪ್ರದೇಶ ಸೇರಿದಂತೆ ೧೬ ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಎನ್‌ಐಎ ತಂಡ ಎಸ್‌ಡಿಪಿಐ ಹಾಗೂ ಪಿಎಎಫ್‌ಐ ಸಂಘಟನೆಯ ಜತೆ ಗುರುತಿಸಿಕೊಂಡಿದ್ದ ಒಟ್ಟು ೨೧ ಆರೋಪಿಗಳನ್ನು ಬಂಧಿಸಿತ್ತು. ಅಲ್ಲದೆ ಈಗಾಗಲೇ ೨೬ ಮಂದಿ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.

Exit mobile version