Site icon Suddi Belthangady

RCB ವಿಜಯೋತ್ಸವದ ವೇಳೆ ಕಾಲ್ತುಳಿತ:ಇಳಂತಿಲ ಮೂಲದ ಚಿನ್ಮಯಿ ಶೆಟ್ಟಿ ಮೃತ್ಯು

ಬೆಳ್ತಂಗಡಿ: ೧೮ ವರ್ಷಗಳ ನಂತರ ಚೊಚ್ಚಲ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆ ವೇಳೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ ಇಳಂತಿಲ ಗ್ರಾಮದ ಅಂಡೆತ್ತಡ್ಕ ಮೂಲದ ಕು. ಚಿನ್ಮಯಿ ಶೆಟ್ಟಿ(೨೦ವ) ಸಹಿತ ೧೧ ಮಂದಿ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಅಂಡೆತ್ತಡ್ಕ ಮೂಲದ ಕರುಣಾಕರ ಶೆಟ್ಟಿ ಮತ್ತು ಕಾರ್ಕಳ ಹೆಬ್ರಿಯ ಪೂಜಾ ಶೆಟ್ಟಿಯವರ ಪುತ್ರಿ ಚಿನ್ಮಯಿ ಶೆಟ್ಟಿ(೨೦ವ.) ಕಾಲ್ತುಳಿತದಿಂದ ಸಾವಿಗೀಡಾಗಿದವರು.

೧೮ ವರ್ಷದ ಕಾಯುವಿಕೆಯ ನಂತರ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಗಳೂರಿನಲ್ಲಿ ಅಭಿಮಾನಿಗಳು ಬರಮಾಡಿಕೊಂಡಾಗ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ ಹಿನ್ನೆಲೆಯಲ್ಲಿ ನೂಕುನುಗ್ಗಲು ಹಾಗೂ ಕಾಲ್ತುಳಿತ ಸಂಭವಿಸಿ ೧೧ ಜನ ಸಾವನ್ನಪ್ಪಿದ್ದು ೩೩ ಮಂದಿ ಗಾಯಗೊಂಡಿದ್ದರು.

ಇಂಜಿನಿಯರಿಂಗ್ ವಿದ್ಯಾರ್ಥಿನಿ ಚಿನ್ಮಯಿ: ಕಾಲ್ತುಳಿತದಲ್ಲಿ ಗಂಭೀರ ಗಾಯಗೊಂಡಿದ್ದ ಚಿನ್ಮಯಿ ಶೆಟ್ಟಿಯವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನಪ್ಪಿದ್ದಾರೆ. ಬೆಂಗಳೂರಿನ ಕನಕಪುರ ರಸ್ತೆಯ ಜ್ಯೋತಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿ.ಇ. ವ್ಯಾಸಂಗ ಮಾಡುತ್ತಿದ್ದ ಚಿನ್ಮಯಿ ಶೆಟ್ಟಿ ಅವರು ಅತ್ಯುತ್ತಮ ಯಕ್ಷಗಾನ ಕಲಾವಿದೆಯೂ ಆಗಿದ್ದರು. ಇವರು ಬೆಂಗಳೂರಿನ ಯಕ್ಷತರಂಗ ತಂಡದ ವಿದ್ಯಾರ್ಥಿನಿಯಾಗಿದ್ದರು. ಚಿನ್ಮಯಿ ಶೆಟ್ಟಿಯವರ ತಂದೆ ಕರುಣಾಕರ ಶೆಟ್ಟಿಯವರು ಮೂಲತ: ಸೋಮವಾರಪೇಟೆ ನಿವಾಸಿಯಾಗಿದ್ದು ಕೆಲವು ವರ್ಷಗಳ ಹಿಂದೆ ಇಳಂತಿಲದಲ್ಲಿ ಜಾಗ ಖರೀದಿಸಿ ಮನೆ ಮಾಡಿದ್ದರು. ಬೆಂಗಳೂರುನಲ್ಲಿ ಉದ್ಯಮಿಯಾಗಿರುವ ಕರುಣಾಕರ ಶೆಟ್ಟಿಯವರು ಕುಟುಂಬದೊಂದಿಗೆ ಬೆಂಗಳೂರುನಲ್ಲಿಯೇ ವಾಸ್ತವ್ಯವಿದ್ದು ಅಂಡೆತ್ತಡ್ಕದಲ್ಲಿ ಅವರ ತಾಯಿ ಮತ್ತು ಮಗಳ ಮಗ ವಾಸ್ತವ್ಯವಿದ್ದಾರೆ.

ಕ್ರಿಕೆಟ್ ಬಗ್ಗೆ ಆಸಕ್ತಿ ಇರಲಿಲ್ಲ: ಕರುಣಾಕರ ಶೆಟ್ಟಿ
ಸ್ನೇಹಿತರೊಂದಿಗೆ ವಿಜಯೋತ್ಸವಕ್ಕೆ ಹೋಗುತ್ತಿರುವುದಾಗಿ ಮಗಳು ಹೇಳಿದ್ದಳು. ವೈದ್ಯರು ಕರೆ ಮಾಡಿ ಸಾವಿನ ಸುದ್ದಿ ತಿಳಿಸಿದರು. ಮಗಳಿಗೆ ಕ್ರಿಕೆಟ್ ಬಗ್ಗೆ ಆಸಕ್ತಿ ಇರಲಿಲ್ಲ. ಆದರೆ ಸ್ನೇಹಿತರು ಕರೆದರು ಎಂದು ಹೋದಳು. ಈ ರೀತಿ ಯಾವ ತಂದೆ-ತಾಯಿಗೂ ಆಗಬಾರದು ಎಂದು ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸುವ ವೇಳೆ ಚಿನ್ಮಯಿ ಶೆಟ್ಟಿ ಅವರ ತಂದೆ ಕರುಣಾಕರ ಶೆಟ್ಟಿ ಹೇಳಿದರು. ಮಧ್ಯಾಹ್ನ ಕರೆ ಮಾಡಿ ಸ್ನೇಹಿತರೊಂದಿಗೆ ವಿಧಾನಸೌಧದತ್ತ ಹೋಗುತ್ತಿರುವುದಾಗಿ ಹೇಳಿದ್ದಳು. ಸಂಜೆ ೫.೩೦ಕ್ಕೆ ವೈದ್ಯರು ಕರೆ ಮಾಡಿ ಸಾವಿನ ಸುದ್ದಿ ತಿಳಿಸಿದರು. ಇನ್ನಾದರೂ ಸರ್ಕಾರ ಯಾವುದೇ ಕಾರ್ಯಕ್ರಮ ಮಾಡುವಾಗ ಸಮರ್ಪಕವಾಗಿ ವ್ಯವಸ್ಥೆ ಮಾಡಬೇಕು. ಕಾಲ್ತುಳಿತದಲ್ಲಿ ಚಿಕ್ಕ ವಯಸ್ಸಿನವರೇ ಮೃತಪಟ್ಟಿದ್ದಾರೆ ಎಂದು ಕರುಣಾಕರ ಶೆಟ್ಟಿ ಹೇಳಿದರು.

ಡಿಸಿಪಿ ಸೈದುಲ್ಲಾ ಅಡಾವತ್ ಇಲ್ಲದಿದ್ದರೆ ಸಾವಿನ ಸಂಖ್ಯೆ ೩೦ ದಾಟುತ್ತಿತ್ತು: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಂಭ್ರಮಾಚರಣೆ ವೇಳೆ ನಡೆದ ಭೀಕರ ಕಾಲ್ತುಳಿತದ ವೇಳೆ ಈ ಹಿಂದೆ ಬಂಟ್ವಾಳದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಸೈದುಲ್ಲಾ ಅಡಾವತ್ ಅವರ ಸಮಯ ಪ್ರಜ್ಞೆಯಿಂದ ಮತ್ತಷ್ಟು ಜೀವಹಾನಿಯಾಗಿರುವುದು ತಪ್ಪಿದೆ. ಉತ್ತರ ವಿಭಾಗದ ಡಿಸಿಪಿ ಸೈದುಲ್ಲಾ ಅಡಾವತ್ ತಾವು ಜನರಿಂದ ತಳ್ಳಿ ಕೆಳಗೆ ಬಿದ್ದರೂ ಪುನಃ ಮೇಲೆದ್ದು ಧೈರ್ಯ ತೋರಿಸಿದ ಕಾರಣ ಹಲವು ಜನರ ಪ್ರಾಣ ಉಳಿಯಲು ಕಾರಣವಾಗಿದೆ. ಒಂದು ವೇಳೆ ಅವರಿಲ್ಲದಿದ್ದರೆ ಸಾವಿನ ಸಂಖ್ಯೆ ೩೦ಕ್ಕಿಂತ ಹೆಚ್ಚಾಗುತ್ತಿತ್ತು ಎಂದು ಪೊಲೀಸ್ ಇಲಾಖೆ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಸೈದುಲ್ಲಾ ಅಡಾವತ್ ಅವರು ಕೆಲವು ಸಮಯಗಳ ಹಿಂದೆ ಬಂಟ್ವಾಳ ಉಪವಿಭಾಗದ ಎಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ನಂ.೧೯ ಬಳಿ ಸಾವಿರಾರು ಅಭಿಮಾನಿಗಳು ಜಮಾವಣೆಗೊಂಡಿದ್ದರು. ವ್ಯವಸ್ಥೆ ಎಡವಟ್ಟಿನ ಕಾರಣದಿಂದಾಗಿ ಕಾಲ್ತುಳಿತ ಸಂಭವಿಸಿತ್ತು. ಈ ವೇಳೆ ಜನರಲ್ಲಿ ಪ್ರಾಣಾಪಾಯದ ಭೀತಿ ಹರಡಿದ್ದು ಎಲ್ಲರೂ ಪ್ರಾಣಾಪಾಯದಿಂದ ಕೆಳಗೆ ಬಿದ್ದವರ ಮೇಲೆ ಕಾಲಿಟ್ಟು ಓಡಲಾರಂಭಿಸಿದ್ದರು. ಆಗ ಕೆಲವರು ನೆಲಕ್ಕೆ ಬಿದ್ದು ಗಾಯಗೊಂಡರು. ಈ ಹೊತ್ತಿನಲ್ಲಿ ಡಿಸಿಪಿ ಸೈದುಲ್ಲಾ ಅಡಾವತ್ ಸ್ಥಳಕ್ಕೆ ತುರ್ತಾಗಿ ಧಾವಿಸಿದ್ದರು. ಆರ್‌ಸಿಬಿ ಅಭಿಮಾನಿಗಳ ಮಧ್ಯೆ ಪ್ರವೇಶಿಸಿದ ಡಿಸಿಪಿಯನ್ನೇ ಇಬ್ಬರು ತಳ್ಳಿ ಬೀಳಿಸಿದರು. ಆದರೂ ಅಲ್ಲಿಂದ ಎದ್ದುಬಂದು ಪುನ: ನೂಕಾಟದಲ್ಲಿಯೇ ಕಾಲ್ತುಳಿತ ಘಟನೆ ಸಂಭವಿಸಿದ ಸ್ಥಳಕ್ಕೆ ಬಂದರು. ಗೇಟಿನ ಬಳಿ ಅಲ್ಲಿ ಉಂಟಾಗಿದ್ದ ಕಾಲ್ತುಳಿತವನ್ನು ನೋಡಿ ತಮ್ಮ ಪ್ರಾಣ ಲೆಕ್ಕಿಸದೇ ನುಗ್ಗಿದ ಅವರು ತಡೆಯು ವುದಕ್ಕೆ ಕರ್ತವ್ಯವನ್ನು ಕೈಬಿಡದೆ ಜನರನ್ನು ನಿಯಂತ್ರಿಸಲು ಮುಂದಾದರು. ಅವರ ಸೂಚನೆಯ ಮೇರೆಗೆ ಇಬ್ಬರು ಸಿಬ್ಬಂದಿಗಳು ಲಾಠಿ ಪ್ರಯೋಗದ ಮೂಲಕ ಜನರನ್ನು ಚದುರಿಸಿದರು. ಕ್ಷಣಕ್ಕೆ ಜನರು ಹಿಂದಿನಿಂದ ಬಂದು ಕೆಳಗೆ ತುಳಿಯುತ್ತಿದ್ದುದನ್ನು ತಪ್ಪಿಸಿ ಕೆಳಗೆ ಬಿದ್ದು ಗಾಯಗೊಂಡ ಜನರನ್ನು ತಾನೆ ಮೇಲಕ್ಕೆತ್ತಿ ಆಸ್ಪತ್ರೆಗೆ ರವಾನೆ ಮಾಡಿದರು. ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಮತ್ತು ಕ್ರೀಡಾಂಗಣದ ಅಧಿಕಾರಿಗಳ ಪ್ರಕಾರ ಡಿಸಿಪಿ ಸೈದುಲ್ಲಾ ಅವರ ಸಮಯಪ್ರಜ್ಞೆ ಇಲ್ಲದಿದ್ದರೆ ಕನಿಷ್ಠ ೨೫ರಿಂದ ೩೦ ಮಂದಿ ಸಾವನ್ನಪ್ಪುವ ಸಾಧ್ಯತೆ ಇತ್ತು. ಈ ಘಟನೆಯಲ್ಲಿ ಧೈರ್ಯ ಮತ್ತು ಕರ್ತವ್ಯ ನಿಷ್ಠೆ ಮೆರೆದ ಡಿಸಿಪಿ ಅಡಾವತ್ ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನು ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಸಿದ್ದಾರೆ.

Exit mobile version