ಕೊಕ್ಕಡ : ಡೆಂಗ್ಯೂ ಜ್ವರವು ಸೋಂಕಿತ ಈಡೀಸ್ ಸೊಳ್ಳೆಯಿಂದ ಹರಡುವುದಾಗಿದ್ದು, ಸಂಗ್ರಹಿಸಿದ ನೀರಿನಲ್ಲಿ ಸೊಳ್ಳೆಗಳ ಸಂತಾನಾಭಿವೃದ್ಧಿಯಾಗುವುದರಿಂದ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ವಿಪರೀತ ಜ್ವರ, ಮೈ ಕೈ ನೋವು, ತಲೆನೋವು ಈ ಜ್ವರದ ಲಕ್ಷಣಗಳಾಗಿದ್ದು, ಈ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆಯನ್ನು ಮಾಡಬೇಕು.
ಡೆಂಗ್ಯೂ ಜ್ವರ ಬಂದವರಿಗೆ ಬಿಳಿ ರಕ್ತ ಕಣಗಳ ಸಂಖ್ಯೆ ಕಡಿಮೆಯಾಗುತ್ತದೆ. ರಕ್ತದಲ್ಲಿನ ಪ್ಲೇಟ್ ಲೇಟ್ ಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾದಾಗ ರಕ್ತಸ್ರಾವ ಕಂಡು ಬರಬಹುದು ಹಾಗಾಗಿ ಮುನ್ನೆಚ್ಚರಿಕ ಕ್ರಮಗಳು ಅತ್ಯಗತ್ಯ ಎಂದು ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ವಿಜ್ಞಾನ ಶಿಕ್ಷಕಿ ಸಂಧ್ಯಾ ಪಿ. ಕೆ.
ಆರೋಗ್ಯ ಇಲಾಖೆಯ ಮಾರ್ಗದರ್ಶನದಂತೆ ತಾಲೂಕು ಆರೋಗ್ಯ ಅಧಿಕಾರಿಗಳ ಸೂಚನೆಯಂತೆ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಶಾಲೆಯಲ್ಲಿ ಡೆಂಗ್ಯೂ ಜ್ವರ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ ನೀಡುವ ನೋಡಲ್ ಅಧಿಕಾರಿಯಾಗಿ ಮಾತನಾಡಿದರು.
ಪಟ್ಟೂರು ಜನ ವಸತಿ ಪ್ರದೇಶದ ಆಶಾ ಕಾರ್ಯಕರ್ತೆ ಚೈತ್ರಾ ಹಾಗೂ ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಾಹಿತಿಯನ್ನು ಪಡೆದುಕೊಂಡರು.