ವೇಣೂರು: ಸರಕಾರಿ ಪ್ರೌಢ ಶಾಲೆ ವೇಣೂರು ಇದರ ಶಾಲಾ ಪ್ರಾರಂಭೋತ್ಸವ ಸಂಭ್ರಮ ಸಡಗರದಿಂದ ಜರುಗಿತು. ಹೊಸದಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಹೂಮಳೆಗೆರೆದು ಬ್ಯಾಂಡ್ ವಾದ್ಯಗಳ ಮೂಲಕ ಶಾಲೆಗೆ ಬರಮಾಡಿಕೊಳ್ಳಲಾಯಿತು.
ಸಂಸ್ಥೆಯ ಸುಮಾರು 600 ವಿದ್ಯಾರ್ಥಿಗಳು ರಸ್ತೆಯುದ್ದಕ್ಕೂ ಮೆರವಣಿಗೆ ಮೂಲಕ ಸಾಗುತ್ತಾ ಗಮನ ಸೆಳೆದರು. ವಿದ್ಯಾಭಿಮಾನಿ ಮೋಹನದಾಸ ಹೆಗ್ಡೆ ಮೆರವಣಿಗೆಗೆ ಚಾಲನೆ ನೀಡಿದರು. ಶಾಲಾ ಎಸ್. ಡಿ. ಎಂ. ಸಿ ಉಪಾಧ್ಯಕ್ಷ ರಾಜೇಶ್ ಪೂಜಾರಿ ಮೂಡುಕೋಡಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಹತ್ತನೇ ತರಗತಿಯ ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿದ ಸಂಸ್ಥೆಯ ಎಲ್ಲಾ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಹಾಗೂ ಪದ್ಮಾಂಬ ಸಮೂಹ ಸಂಸ್ಥೆಯ ಮಾಲಕ ಜಿನರಾಜ್ ಜೈನ್ ಉಪಸ್ಥಿತರಿದ್ದು ಮಕ್ಕಳಿಗೆ ಸಿಹಿಯನ್ನು ಹಂಚಿ ಶುಭ ಹಾರೈಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತಿನ ಸದಸ್ಯೆ ಸಂಭಾಷಿಣಿ ಜೈನ್, ಎಸ್. ಡಿ. ಎಂ. ಸಿ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇಣೂರು ಗ್ರಾಮ ಪಂಚಾಯತಿನ ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ ವಹಿಸಿ ವಿದ್ಯಾರ್ಥಿಗಳಿಗೆ ಸರಕಾರದಿಂದ ಸಿಗುವ ಪಠ್ಯಪುಸ್ತಕಗಳನ್ನು ವಿತರಿಸಿ ಅಧ್ಯಕ್ಷೀಯ ನುಡಿಯನ್ನು ನುಡಿದರು. ಕನ್ನಡ ಭಾಷೆ ಶಿಕ್ಷಕ ರವೀಂದ್ರ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಸೂಯ ಪಾಟಕ್ ಪ್ರಾರ್ಥಿಸಿದರು. ಶಾಲೆಯ ಹಿರಿಯ ಶಿಕ್ಷಕಿ ಸುಕನ್ಯಾ ಪ್ರಭು ಸ್ವಾಗತಿಸಿದರು. ಗಣಿತ ಶಿಕ್ಷಕರಾದ ನೆಲ್ಸನ್ ಹೆರಾಲ್ಡ್ ಕ್ಯಾಸ್ಟಲಿನೋ ನಿರೂಪಿಸಿದರು. ಸಮಾಜ ವಿಜ್ಞಾನ ಶಿಕ್ಷಕಿ ಸುಶೀಲಾ ಜಿ. ಧನ್ಯವಾದವಿತ್ತರು.