Site icon Suddi Belthangady

ಕುಂಡದಬೆಟ್ಟು ಮಂಜುಶ್ರೀ ಭಜನಾ ಮಂಡಳಿಯಿಂದ ಉಚಿತ ಪುಸ್ತಕ ವಿತರಣೆ

ಕುಂಡದಬೆಟ್ಟು: ಮಂಜುಶ್ರೀ ಭಜನಾ ಮಂಡಳಿ ಕುಂಡದಬೆಟ್ಟು ಇದರ ವತಿಯಿಂದ ಕುಕ್ಕೇಡಿ ನಿಟ್ಟಡೆ ಗ್ರಾಮಗಳ ಎಂಟರಿಂದ ದ್ವಿತೀಯ ಪಿಯುಸಿ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚಿತ ಪುಸ್ತಕ ವಿತರಣೆ ಮಂಜುಶ್ರೀ ಭಜನಾ ಮಂದಿರದಲ್ಲಿ ಜರಗಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿರುವ ಮಂಡಳಿಯ ಅಧ್ಯಕ್ಷ ರವಿ ಕುಮಾರ್ ಕೆ. ವೈ. ಮಾತಾಡುತ್ತಾ ವಿದ್ಯಾರ್ಥಿಗಳು ಪಾಠ ಪುಸ್ತಕಗಳನ್ನು ಕಲಿಯುದರ ಜೊತೆ ಜೊತೆಗೆ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡು ದೇಶದ ಸಂಸ್ಕೃತಿ ಆಚಾರ ವಿಚಾರಗಳನ್ನು ಗೌರವಿಸುತ್ತಾ ಪಾಲಿಸಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಮಾರಂಭವನ್ನು ಉದ್ಘಾಟಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಜ್ಯೋತ್ಸ್ನಾ ಮಾತನಾಡುತ್ತಾ ಪುಸ್ತಕ ನೀಡಿದಂತಹ ಸಂಸ್ಥೆಗೆ ವಿದ್ಯಾರ್ಥಿಗಳು ಯಾವಾಗಲೂ ಚಿರಋಣಿಗಳಾಗಿರಬೇಕು. ಹದಿಹರೆಯದ ವಿದ್ಯಾರ್ಥಿಗಳು ಸಾಧ್ಯವಾದಷ್ಟು ಆರೋಗ್ಯಕ್ಕೆ ಹಾನಿಕರವಾದ ಕೆಲವು ತಂಪು ಪಾನೀಯ, ಮಧ್ಯಪಾನ, ಮಾದಕ ವ್ಯಸನಗಳ ಬಗ್ಗೆ ಜಾಗೃತಿ ಹೊಂದಬೇಕು ಅವುಗಳ ಸೇವನೆಯಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ನೀಡಿದರು.

ಮಂಡಳಿಯ ಗೌರವಾಧ್ಯಕ್ಷ ಅನಿಲ್ ಹೆಗ್ಡೆ ಕೇದಗೆವನ, ಕಾರ್ಯದರ್ಶಿ ತನಿಯಪ್ಪ ರಾಣ್ಯ, ಜೊತೆ ಕಾರ್ಯದರ್ಶಿ ಸಂತೋಷ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಟ್ಟು 110 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆಯನ್ನು ಮಾಡಲಾಯಿತು. ಎಸ್.ಎಸ್.ಎಲ್.ಸಿ ಯಲ್ಲಿ 90% ಅಂಕ ಪಡೆದ 3 ವಿದ್ಯಾರ್ಥಿಗಳಿಗೆ ಜಗನ್ನಾಥ ದೇವಾಡಿಗ ಪ್ರಯೋಜಕತ್ವದಲ್ಲಿ ನಗದು ಬಹುಮಾನದೊಂದಿಗೆ ಅಭಿನಂದಿಸಲಾಯಿತು. ಪ್ರೇಕ್ಷಾ, ದಿವ್ಯ, ಪ್ರಣಮ್ಯರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷ ಭರತ್ ರಾಜ್ ಅಮೈ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಜಗನ್ನಾಥ ದೇವಾಡಿಗ ನಿರೂಪಿಸಿ, ಗೌರವಾಧ್ಯಕ್ಷ ಅನಿಲ್ ಹೆಗ್ಡೆ ಧನ್ಯವಾದ ಸಮರ್ಪಿಸಿದರು.

Exit mobile version