Site icon Suddi Belthangady

ಕೈ ಸನ್ನೆ ಮಾಡಿ ಬಸ್ ನಿಲ್ಲಿಸಿ ಗಾಜಿಗೆ ಕಲ್ಲೆಸೆದು ಪರಾರಿ: ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಪುಂಜಾಲಕಟ್ಟೆ: ಬಸ್ಸಿಗೆ ಕೈ ಸನ್ನೆ ಮಾಡಿ ವ್ಯಕ್ತಿಯೋರ್ವ ಬಸ್ಸು ನಿಲ್ಲಿಸಿ ಗಾಜಿಗೆ ಕಲ್ಲೆಸೆದು ಪರಾರಿಯಾದ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಚ್ಚಿನ ಗ್ರಾಮದ ಬಂಗೇರಕಟ್ಟೆ-ಕಲ್ಲಗುಡ್ಡೆ ಎಂಬಲ್ಲಿ ಮೇ.30ರಂದು ರಾತ್ರಿ ನಡೆದಿದೆ.

ಬಸ್ಸು ಚಾಲಕ ಬಂದಾರು ಗ್ರಾಮದ ಮೈರೋಳ್ತಡ್ಕ-ಕೋಡಿ ನೆಕ್ಕಿಲು ನಿವಾಸಿ ಸತೀಶ್ (40) ಅವರು ಪುಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಿದ್ದು, ಇವರು ಚೇತನ್ ಬಂದಾರು ಎಂಬವರ ಮಾಲಕತ್ವದ ಕೆ.ಎ.19 ಎ.ಡಿ.9221 ನೋಂದಣಿ ಸಂಖ್ಯೆಯ ಶಿವ ಕೃಪಾ ಬಸ್ಸಿನಲ್ಲಿ ಚಾಲಕನಾಗಿ ಹಾಗೂ ಚೇತನ್ ಎಂಬವರು ನಿರ್ವಾಹಕನಾಗಿ ಕೆಲಸ ಮಾಡಿಕೊಂಡಿದ್ದು, ಮೇ.30ರಂದು ಸಂಜೆ ಉಪ್ಪಿನಂಗಡಿಯಿಂದ ಪ್ರಯಾಣಿಕರನ್ನು ಬಸ್ಸಿನಲ್ಲಿ ಕುಳ್ಳಿರಿಸಿಕೊಂಡು ಮಡಂತ್ಯಾರು ಕಡೆಗೆ ಹೊರಟು ಬರುತ್ತಾ ಸಂಜೆ 7:10ರ ವೇಳೆಗೆ ಬೆಳ್ತಂಗಡಿ ತಾಲೂಕು, ಮಚ್ಚಿನ ಗ್ರಾಮದ, ಬಂಗೇರಕಟ್ಟೆ ಕಲ್ಲಗುಡ್ಡೆ ಎಂಬಲ್ಲಿಗೆ ತಲುಪಿದಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು ರಸ್ತೆಯ ಬಲ ಬದಿಯಲ್ಲಿ ರೈನ್ ಕೋಟ್ ಧರಿಸಿಕೊಂಡು ನಿಂತಿದ್ದವನು ಬಸ್ಸು ನಿಲ್ಲಿಸುವಂತೆ ಕೈ ಸನ್ನೆ ಮಾಡಿದಾಗ ಸತೀಶ್ ಅವರು ಬಸ್ಸು ನಿಲ್ಲಿಸಲು ಬ್ರೇಕ್ ಹಾಕಿದ್ದಾರೆ. ಸದ್ರಿ ಅಪರಿಚಿತ ವ್ಯಕ್ತಿ ಬಸ್ಸಿನ ಮುಂಭಾಗಕ್ಕೆ ಬಂದು ಆತನ ಕೈಯಲ್ಲಿದ್ದ ಮುಷ್ಠಿ ಗಾತ್ರದ ಕಲ್ಲನ್ನು ಬಸ್ಸಿನ ಮುಂಭಾಗದ ಗಾಜಿಗೆ ಬಿಸಾಡಿ ಕಲ್ಲಗುಡ್ಡೆ ಕಡೆಗೆ ಓಡಿ ಹೋಗಿರುತ್ತಾನೆ. ಆತನ ಕೃತ್ಯದಿಂದ ಬಸ್ಸಿನ ಗಾಜು ಒಡೆದಿರುವುದರಿಂದ ಸುಮಾರು 40 ಸಾವಿರ ರೂಪಾಯಿ ನಷ್ಟ ಉಂಟಾಗಿರುತ್ತದೆ ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version