Site icon Suddi Belthangady

ಕಲ್ಮಂಜ ಅಲೆಕ್ಕಿಯಲ್ಲಿ ದೈವಜ್ಞರಿಂದ ಮರು ಪ್ರಶ್ನಾ ಚಿಂತನೆ


ಕಲ್ಮಂಜ: ಅಲೆಕ್ಕಿ ಶ್ರೀ ಶಕ್ತಿ ದುರ್ಗಾ ದೇವಸ್ಥಾನ ಸಾವಿರಾರು ವರ್ಷಗಳ ಇತಿಹಾಸವಿರುವ ಕಾನಂಗು ಅರಣ್ಯದ ತಪ್ಪಲಿನಲ್ಲಿ ಕಾಡು ಪೊದೆಗಳಿಂದ ಆವರಿಸಿ ಹಿಂದಿನ ಕಾಲದ ದೇವಸ್ಥಾನವಿದ್ದ ಕುರುಹುಗಳಿದ್ದು ಅಜೀರ್ಣಾವಸ್ಥೆಯಲ್ಲಿತ್ತು.

ದೇವರ ಪ್ರೇರಣೆಯಿಂದ ಮೂರು ತಿಂಗಳ ಹಿಂದೆ ಜೀರ್ಣಾವಸ್ಥೆಗಾಗಿ ಊರವರೆಲ್ಲ ಸೇರಿಕೊಂಡು ಸಮಿತಿ ರಚನೆ ಮಾಡಿಕೊಂಡು ಮಂಗಳೂರಿನ ದೈವಜ್ಞರಾದ ದಿನೇಶ್ ಪಣಿಕ್ಕರ್ ರವರನ್ನು ಕರೆಸಿ ಪ್ರಶ್ನಚಿಂತನೆಯನ್ನು ನಡೆಸಿ ಮೇ.6ರಿಂದ 9ರವರೆಗೆ ಪ್ರಾಯಶ್ಚಿತ್ತಾದಿ ಪೂಜಾ ವಿಧಿ ವಿಧಾನಗಳು ನಡೆದು ನಂತರ ಅಲ್ಲಿರುವ ದೇವಸ್ಥಾನದ ಕುರುಹುಗಳಿರುವ ಸ್ಥಳಗಳನ್ನು ಶೋಧಿಸಿದ ನಂತರ ಮೇ.. 23 ದೈವಜ್ಞರನ್ನು ಕರೆಸಿ ಮರು ಪ್ರಶ್ನಚಿಂತನೆ ನಡೆಯಿತು.

ಪ್ರಶ್ನಾ ಚಿಂತನೆಯ ಪ್ರಕಾರ ಹಿಂದಿನ ಯುಗಗಳಲ್ಲಿ ಆರಾಧಿಸಲ್ಪಟ್ಟ ಈ ಸಾನಿಧ್ಯವು ದೇಶದಲ್ಲೇ ಎರಡನೆಯ ಸ್ಥಾನದಲ್ಲಿರುವಷ್ಟು ಮಹತ್ವವುಳ್ಳ ಶಕ್ತಿಪೀಠ ಎಂಬ ವಿಷಯ ಪ್ರಶ್ನೆ ಚಿಂತನೆಯಲ್ಲಿ ತಿಳಿದು ಬಂದಿದೆ.

ಈ ಕ್ಷೇತ್ರವು ದೇವಿಯ ಶಕ್ತಿಪೀಠ ಹಾಗೂ ಶಕ್ತಿದುರ್ಗೆಯ ಸಾನಿಧ್ಯವಿರುವುದು ಕಂಡುಬಂದಿದೆ. ಇದರೊಂದಿಗೆ ನಾಗಬ್ರಹ್ಮ, ನಾಗದೇವರು ರಕ್ತೇಶ್ವರಿ, ನಂದಿಕೋಣ, ಕ್ಷೇತ್ರಪಾಲ ಮತ್ತು ಶೃಂಗಮುನಿಗಳ ಗುರುಪೀಠಗಳಿರುವ ದೇವಸ್ಥಾನ ಜೊತೆಗೆ ಪಂಜುರ್ಲಿ, ಕಿರಾತಮೂರ್ತಿ, ಶಕ್ತಿಗಳಿರುವ ಪ್ರಸಿದ್ಧ ಕ್ಷೇತ್ರವಾಗಿದ್ದು ಗ್ರಾಮಕ್ಕೆ ಸಂಭಂದಪಟ್ಟ ಗ್ರಾಮ ದೈವ ವ್ಯಾಘ್ರ ಚಾಮುಂಡಿಯ ಉತ್ಸವಗಳು ವಿಜೃಂಭಣೆಯಿಂದ ನಡೆಯುತ್ತಿತ್ತು. ಎಂಬುದು ಪ್ರಶ್ನಚಿಂತನೆಯಲ್ಲಿ ಕಂಡುಬಂದಿದೆ.ಹಾಗೂ ಇನ್ನು ಮುಂದೆ ‘ಶ್ರೀ ಶಕ್ತಿ ದುರ್ಗಾ ದೇವಸ್ಥಾನ’ ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತದೆ.

Exit mobile version