Site icon Suddi Belthangady

ಸಿದ್ದರಾಮಯ್ಯ ಸರಕಾರಕ್ಕೆ ಎರಡು ವರ್ಷ-ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಸಂಭ್ರಮಾಚರಣೆ

ಬೆಳ್ತಂಗಡಿ: ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಎರಡು ವರ್ಷ ಸಂದ ಸಂದರ್ಭದಲ್ಲಿ ಶಕ್ತಿ ಯೋಜನೆಯ ಯಶಸ್ವಿಗಾಗಿ ಮೇ. 21ರಂದು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಸಂಭ್ರಮಾಚರಣೆ ನಡೆಯಿತು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ಮಾತನಾಡಿ ರಾಜ್ಯ ಸರ್ಕಾರ ಐದು ಗ್ಯಾರಂಟಿಗಳ ಮೂಲಕ ನುಡಿದಂತೆ ನಡೆದು ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿದೆ. ತಾಲ್ಲೂಕಿನಲ್ಲಿ 1.25 ಕೋಟಿ ಮಹಿಳೆಯರು ಶಕ್ತಿ ಯೋಜನೆಯನ್ನು ಉಪಯೋಗಿಸಿದ್ದು, ರಾಜ್ಯ ಸರ್ಕಾರ 65 ಕೋಟಿ ರೂಪಾಯಿಗಳನ್ನು ನಮ್ಮ ತಾಲೂಕಿಗೆ ನೀಡಿದೆ. ಯಾವುದೇ ಕಾರಣಕ್ಕೂ ಯಾವುದೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಬದಲಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುತ್ತೇವೆ. ರಾಜ್ಯ ಸರ್ಕಾರ ಹೊಸ ಎಲೆಕ್ಟ್ರಾನಿಕ್ ಬಸ್ ಗಳನ್ನು ಖರೀದಿ ಮಾಡಲು ನಿರ್ಧರಿಸಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ 400 ಬಸ್ ಗಳನ್ನು ನೀಡಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ನೀಡಲಾಗಿದೆ ಎಂದರು.

ತಾಲೂಕು ಪಂಚಾಯತ್ ಅಧಿಕ್ಷಕ ಪ್ರಶಾಂತ್ ಬಳೆಂಜ, ಕರ್ನಾಟಕ ರಸ್ತೆ ಸಾರಿಗೆ ನಿಗಮ ಧರ್ಮಸ್ಥಳ ಡಿಪೋದ ಪಾರುಪತ್ಯಗಾರ ಅತಾವುಲ್ಲಾ, ಮೇಲ್ವಿಚಾರಕ (ಸಿಬ್ಬಂದಿ) ರೋಶನ್, DTI ರಮೇಶ್, ಬೆಳ್ತಂಗಡಿ ಬಸ್ ನಿಲ್ದಾಣ ಸಂಚಾರ ನಿಯಂತ್ರಕ ಆರ್ ವಸಂತ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಸೌಮ್ಯ ಲಾಯಿಲ, ವಂದನಾ ಭಂಡಾರಿ, ಕೇಶವ ನಾಯ್ಕ್, ಮೆರಿಟಾ ಪಿಂಟೊ, ವಿಜಯ ಗೌಡ, ನೇಮಿರಾಜ್ ಕಿಲ್ಲೂರು, ಶರೀಫ್ ಸಬರಬೈಲು, ವೀರಪ್ಪ ಮೊಯ್ಲಿ ಹಾಗೂ ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ಉಪಸ್ಥಿತರಿದ್ದರು. ಹಾಜರಿದ್ದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು, ಚಾಲಕ, ನಿರ್ವಾಹಕರನ್ನು ಶಾಲು ಹೊದಿಸಿ, ಗುಲಾಬಿ ಹೂವು ನೀಡಿ ಗೌರವಿಸಲಾಯಿತು. ಪ್ರಯಾಣಿಕರಿಗೆ ಸಿಹಿತಿಂಡಿ ಹಂಚಿ ಸಂಭ್ರಮಿಸಿದರು.

Exit mobile version