Site icon Suddi Belthangady

ಬಾಂಜಾರು ಗುಡ್ಡಗಾಡು ಜನತೆಗೆ ಆರೋಗ್ಯ ಸೇವೆ ಒದಗಿಸಿದ ಮನ್ ಶರ್ ಪ್ಯಾರಾಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು

ಬೆಳ್ತಂಗಡಿ: ಚಾರ್ಮಾಡಿ ಘಾಟ್ ನ ತಪ್ಪಲಲ್ಲಿ ಸುಮಾರು 10ಕಿಲೋ ಮೀಟರ್ ನಷ್ಟು ದಟ್ಟ ಅರಣ್ಯದ ಮಧ್ಯೆ ಕಲ್ಲು ಮುಳ್ಳಿನ ರಸ್ತೆಯಲ್ಲಿ ಸಂಚರಿಸಿ ಬಾಂಜಾರು ಎಂಬ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿರುವ ಮೂಲಭೂತ ಆರೋಗ್ಯ ಸೇವೆಯಿಂದ ವಂಚಿತರಾದ ವನವಾಸಿ ಜನರಿಗೆ ಮನ್‌ಶರ್ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಆರೋಗ್ಯ ಸೇವೆ ಒದಗಿಸಿಕೊಟ್ಟು ವನವಾಸಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವನವಾಸಿ ನಾಯಕ ಭಗವಾನ್ ಬಿರ್ಸ ಮುಂಡರವರ 150ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಕಕ್ಕಿಂಜೆಯ ಪ್ರಸಿದ್ಧ ಶ್ರೀಕೃಷ್ಣ ಆಸ್ಪತ್ರೆ ಹಾಗೂ ಎಂ.ಆರ್.ಪಿ.ಎಲ್ ಪ್ರಾಯೋಜಕತ್ವದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧಿ ವಿತರಣೆಯ ಕಾರ್ಯಕ್ರಮದಲ್ಲಿ ಬಹುತೇಕ ಮಿಂಚಿದ್ದೇ ಈ ವಿದ್ಯಾರ್ಥಿಗಳು.

ಈ ಶಿಬಿರದಲ್ಲಿ ಮನ್ ಶರ್ ಪ್ಯಾರ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಹೈದರ್ ಮರ್ದಾಳ, ವಿದ್ಯಾರ್ಥಿನಿಯರಾದ ಶಹೀನಾ ಜಾರಿಗೆಬೈಲು, ಬದ್ರುನ್ನಿಸ ಕುಪ್ಪೆಟ್ಟಿ, ಫರ್ಝಾನಾ ಕಳಂಜಿಬೈಲು, ಹಾಜಿರಾ ಕಣಿಯೂರು, ವಾಫಿಯಾ ವೇಣೂರು ಹಾಗು ಆಶಿಕಾ ವೇಣೂರು ಇವರುಗಳು ಶಿಬಿರದ ಯಶಸ್ಸಿಗೆ ಸಹಕರಿಸಿದರು.

ಜನರಿಗೆ ಉಚಿತ ಆರೋಗ್ಯ ತಪಾಸಣೆ, ಉಚಿತ ಔಷಧಿ ವಿತರಣೆ, ಇ. ಸಿ. ಜಿ, ಬಿ. ಪಿ, ಶುಗರ್, ರಕ್ತದ ಗುಂಪು ವಿಂಗಡಣೆ, ಹಲವು ಪ್ರಶಸ್ತಿ ಪುರಸ್ಕೃತ ವೈದ್ಯರು, ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಮುರಳಿಕೃಷ್ಣ ಇರ್ವತ್ರಾಯ, ಡಾ. ವಂದನಾ ಇರ್ವತ್ರಾಯ ಹಾಗೂ ಡಾ.ಆಲ್ಬಿನ್ ಜೋಸೆಫ್ ರವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರುಗಿತ್ತು. ಎಂಆರ್‌ಪಿಎಲ್ ನ ಮುಖ್ಯ ಕಾರ್ಯನಿರ್ವಾಹಕ ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು.

ಸುಮಾರು 100ಕ್ಕಿಂತಲೂ ಅಧಿಕ ಗ್ರಾಮಸ್ಥರು, ಮಕ್ಕಳು ಈ ಆರೋಗ್ಯ ಶಿಬಿರದ ಪ್ರಯೋಜನವನ್ನು ಪಡೆದರು. ಈಗಾಗಲೇ ನಗರ, ಪಟ್ಟಣ ಹಾಗೂ ಗ್ರಾಮೀಣ ಮಟ್ಟದಲ್ಲಿ ಹಲವು ರೀತಿಯ ಆರೋಗ್ಯ ಸೇವೆಯನ್ನು ನೀಡುತ್ತಿರುವ ಮನ್ ಶರ್ ಪ್ಯಾರಾ ಮೆಡಿಕಲ್ ಕಾಲೇಜಿನ ಸೇವೆಯು, ಮೂಲಭೂತ ಆರೋಗ್ಯ ಸೌಕರ್ಯಗಳಿಂದ ವಂಚಿತರಾದ ಗುಡ್ಡಗಾಡು ಜನರಿಗೆ ವಿಸ್ತರಿಸಿರುವುದು ಬಹಳ ಸಂತೋಷ ತಂದಿದೆ. ಇದಕ್ಕಾಗಿ ಸಂಸ್ಥೆಪ್ರಾಂಶುಪಾಲರಾದ ಹೈದರ್ ಮರ್ದಾಳ ಹಾಗೂ ಪ್ಯಾರಮೆಡಿಕಲ್ ವಿದ್ಯಾರ್ಥಿಗಳ ಸೇವೆಯನ್ನು ಸಂಸ್ಥೆಯ ಚೇರ್ ಮೆನ್ ಸೈಯದ್ ಉಮರ್ ಅಸ್ಸಖಾಫ್ ಮನ್ ಶರ್ ತಂಙಳ್ ರವರು ಪ್ರಶಂಶಿಸಿದರು.

Exit mobile version