ಉಜಿರೆ: ದೇಶ ಮೊದಲು, ಉದ್ಯೋಗ ಯಾವಾಗಲೂ ಎನ್ನುತ್ತಾ ದೇಶದ ಅಭಿವೃದ್ಧಿ ಮತ್ತು ಉತ್ತಮ ದೇಶದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು. ಮಕ್ಕಳಿಗೆ ನೈತಿಕತೆ ಮತ್ತು ದೇಶಭಕ್ತಿ ಬೆಳೆಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸಬೇಕು. ಸೈನಿಕರು ದೇಶದ ಹೆಮ್ಮೆ. ಸೇನೆಯಲ್ಲಿ ಇರುವ ಉದ್ಯೋಗಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಯಪ್ರಕಾಶ್ ಕೆ. ಎಮರ್ಜೆನ್ಸಿ ಮೆಡಿಕಲ್ ಟೇಕ್ನೀಷಿಯನ್, ಭಾರತೀಯ ವಾಯುಸೇನೆ ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಸೈನಿಕನ ಮಾತು ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಸಂತೋಷ್ ಆಲ್ಬರ್ಟ್ ಸಲ್ಡಾನ ಇವರು ಮಾತನಾಡಿ ಗೌರವ ವೃತ್ತಿ ಎಂದರೆ ಶಿಕ್ಷಕ ವೃತ್ತಿ. ಶಿಕ್ಷಕರೂ ಸಹ ಗೌರವಿಸುವ ವೃತ್ತಿ ಎಂದರೆ ಅದು ಸೈನಿಕ ವೃತ್ತಿ. ಸಾಧ್ಯವಾದಷ್ಟು ಆ ವೃತ್ತಿಯನ್ನು ಗಳಿಸಿ ದೇಶ ಸೇವೆ ಮಾಡುವಲ್ಲಿ ನಿಮ್ಮ ಮುಂದಿನ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ವಿದ್ಯಾಶ್ರೀ ಪಿ,., ತಿರುಮಲೇಶ್ ರಾವ್ ಎನ್. ಕೆ., ಅನುಷಾ ಡಿ. ಜೆ., ಆಧ್ಯಾ ಯು ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಯಪ್ರಕಾಶ್ ಕೆ. ಅವರನ್ನು ಸನ್ಮಾನಿಸಲಾಯಿತು.
ದ್ವಿತೀಯ ಬಿ.ಎಡ್. ಪ್ರಶಿಕ್ಷಣಾರ್ಥಿಗಳಾದ ನಾಗವೇಣಿ ಸ್ವಾಗತಿಸಿದರು. ದೀಕ್ಷಿತ್ ಅತಿಥಿ ಪರಿಚಯಿಸಿದರು. ಹೇಮಾವತಿ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರತಿಮಾ ವಂದಿಸಿದರು.