Site icon Suddi Belthangady

ಅರಸಿನಮಕ್ಕಿ: ಪೆರ್ಲ ಕಾರ್ಯಕ್ಷೇತ್ರದ ಭುವನೇಶ್ವರಿ ಜ್ಞಾನವಿಕಾಸ ಕೇಂದ್ರದ ಸಭೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅರಸಿನಮಕ್ಕಿ ವಲಯದ ಪೆರ್ಲ ಕಾರ್ಯಕ್ಷೇತ್ರದ ಭುವನೇಶ್ವರಿ ಜ್ಞಾನವಿಕಾಸ ಕೇಂದ್ರದ ಸಭೆಯನ್ನು ಪುಷ್ಪರವರ ಮನೆಯ ಮಾವಿನ ಮರದಡಿಯಲ್ಲಿ ನಡೆಸಲಾಯಿತು. ಈ ದಿನ ಅಜ್ಜಿ ಕೈತುತ್ತು ಕಾರ್ಯಕ್ರಮವನ್ನು ನಡೆಸಲಾಗಿದ್ದು, ನೀಲಮ್ಮರವರು ರಾಜ ರಾಣಿಯ ಕಥೆಯನ್ನು ಮಕ್ಕಳಿಗೆ ಹೇಳುವುದರ ಮೂಲಕ ಮಕ್ಕಳಿಗೆ ಕೈತುತ್ತನ್ನು ತಿನ್ನಿಸಿದರು.

ಜ್ಞಾನ ವಿಕಾಸ ಕೇಂದ್ರದ ಗೌರವಾನ್ವಿತ ನಿರ್ದೇಶಕ ವಿಠಲ ಪೂಜಾರಿರವರು ಹಿಂದಿನ ಕಾಲದಲ್ಲಿ ಕೂಡು ಕುಟುಂಬವಿದ್ದು ಅಜ್ಜಿಯಂದಿರು ಮಕ್ಕಳಿಗೆ ಕೈ ತುತ್ತು ತಿನ್ನಿಸುವ ಮೂಲಕ ರಾಜ ರಾಣಿಯರ ಮಹಾಭಾರತ ರಾಮಾಯಣದ ಕಥೆಗಳನ್ನ ಹೇಳುತ್ತಾ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿಸುವುದರೊಂದಿಗೆ ಉತ್ತಮ ಮಾಹಿತಿಯನ್ನು ನೀಡುತ್ತಿದ್ದರು. ಈ ಮೂಲಕ ಅಜ್ಜಿ ಮೊಮ್ಮಕ್ಕಳ ಬಾಂಧವ್ಯ ಕೂಡ ಉತ್ತಮವಾಗಿರುತ್ತಿತ್ತು.

ಇತ್ತೀಚಿನ ಮಕ್ಕಳಿಗೆ ಅದರ ಅರಿವುಗಳಿಲ್ಲದೆ ಇದ್ದು ಕೇವಲ ಮೊಬೈಲ್ ಟಿವಿಯ ಮುಂದೆ ಕುಳಿತುಕೊಳ್ಳುವುದು ಸಾಮಾನ್ಯವಾಗಿದೆ. ನಮ್ಮ ಜೀವನದ ಕಷ್ಟಗಳ ಅರಿವನ್ನ ಮಕ್ಕಳಿಗೆ ಮೂಡಿಸಿ ಬಾಂಧವ್ಯದ ಬೆಲೆಯನ್ನು ತಿಳಿಸಿಕೊಡಬೇಕಾದ ಅನಿವಾರ್ಯತೆ ಇದೆ ಎಂದು ಅಜ್ಜಿ ಕೈತುತ್ತಿನ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿದರು. ಕೇಂದ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು. ಜ್ಞಾನವಿಕಾಸ ಕಾರ್ಯಕ್ರಮದ ಕೇಂದ್ರ ಕಚೇರಿಯ ಯೋಜನಾಧಿಕಾರಿ ಮಲ್ಲಿಕಾ, ಜ್ಞಾನವಿಕಾಸ ಯೌಟ್ಯೂಬ್ ಚಾನಲ್ ನಿರೂಪಕರಾದ ಪೂಜಾ ಹಾಗೂ ಸಂದೀಪ್ ರವರು ಆಗಮಿಸಿ ಸಭೆಯ ಚಿತ್ರೀಕರಣವನ್ನು ನಡೆಸಿದರು. ಕೇಂದ್ರದ ಸದಸ್ಯರು ಹಾಗೂ ಸುಮಾರು 30 ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Exit mobile version