ಬೆಳ್ತಂಗಡಿ: ಪುರುಷ ಕಟ್ಟುವ ಇತಿಹಾಸಿಕ ಪಾರಂಪರಿಕ ಆಚರಣೆಯಲ್ಲಿ ವೇಣೂರು ಠಾಣಾ ವ್ಯಾಪ್ತಿಯಲ್ಲಿ ಮುಸ್ಲಿಂ ಸಮುದಾಯದ ಜನರನ್ನು ಗುರಿಯಾಗಿಸಿ ಪ್ರವಾದಿ ಮತ್ತು ಮುಸ್ಲಿಂ ಮಹಿಳೆಯರನ್ನು ನಿಂದನೆ ಮಾಡಿದ 17 ಮಂದಿ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ವೇಣೂರು ಠಾಣೆ ಎದುರು
ಎಸ್ ಡಿ ಪಿ ಐ ವತಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ಎಸ್ ಡಿ ಪಿ ಐ ಜಲ್ಲಾ ಕಾರ್ಯದರ್ಶಿ ನವಾಝ್ ಶರೀಫ್ ಹೇಳಿದರು. ಅವರು ಎ. 19 ರಂದು ಬೆಳ್ತಂಗಡಿಯಲ್ಲಿ ಕರೆದ ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡಿದರು.
ಪುರುಷ ಕಟ್ಟುವ ನೆಪದಲ್ಲಿ ಎಸ್ ಡಿ ಪಿ ಐ ಧ್ವಜವನ್ನು ಕಳ್ಳತನ ಮಾಡಿ ಧ್ವಜ ದುರ್ಬಳಕೆ ಮಾಡಿದ್ದಾರೆ. ಇವರ ವಿರುದ್ಧ ಠಾಣೆಗೆ ದೂರು ನೀಡಿದ್ದರು. ಎಫ್ ಐ ಆರ್ ಮಾಡಲು ಪೊಲೀಸರು ವಿಳಂಬ ಮಾಡಿದ್ದಾರೆ.
1000 ವರ್ಷದ ಇತಿಹಾಸ ಇರುವ ಪುರುಷ ಕಟ್ಟುವ ಕ್ರಮದಲ್ಲಿ ಬೊಳ್ಳು ಕಲ್ಲು ಸಾಹೇಬ ವೇಷದಲ್ಲಿ ಪೂಜಿಸಿ ಗೌರವಿಸುವ ಕ್ರಮ ಇತ್ತು. ಆದರೆ ಈಗ ಒಂದು ಸಮುದಾಯವನ್ನು, ಮಹಮ್ಮದ್ ಪೈಗಂಬರ್, ಪ್ರವಾದಿ ಅಝನ್, ಮುಸ್ಲಿಂ ಮಹಿಳೆಯರನ್ನು ಅವಮಾನ ಮಾಡುವ ರೀತಿಯಲ್ಲಿ ಇದೆ. ಇದರಿಂದ ಎರಡು ಧರ್ಮಗಳ ನಡುವೆ ಎತ್ತಿ ಕಟ್ಟುವ ಕೆಲಸ ಆಗಿದೆ ಮುಂದಿನ ದಿನಗಳಲ್ಲಿ ಇಂತಹ ನಿಂದನೆ ಆಗಬಾರದು. ಅಲ್ಲದೆ ಈ ರೀತಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ದ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಜಿಲ್ಲಾ ಸದಸ್ಯರಾದ ಮಹಮ್ಮದ್ ಕಬೀರ್, ಹನೀಫ್ ಪುಂಜಾಲಕಟ್ಟೆ, ಬೆಳ್ತಂಗಡಿ ಉಪಾಧ್ಯಕ್ಷ ನಿಶಾರ್ ಕುದ್ರಡ್ಕ, ವೇಣೂರು ವಲಯದ ಆಶ್ರಫ್ ಬದ್ಯಾರು ಉಪಸ್ಥಿತರಿದ್ದರು.