Site icon Suddi Belthangady

ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಕುತ್ಲೂರು ಸರ್ಕಾರಿ ಶಾಲೆಯ ಮಕ್ಕಳನ್ನು ಭೇಟಿ ಮಾಡಿಸಿದ ರಕ್ಷಿತ್ ಶಿವರಾಂ

ಬೆಳ್ತಂಗಡಿ: ತಾಲ್ಲೂಕಿನ ಕುತ್ಲೂರು ಸರಕಾರಿ ಶಾಲೆಯ ಮಕ್ಕಳು ಶಾಲೆಯ ಆವರಣದಲ್ಲಿ ತಮ್ಮ ಕಲಿಕೆಯ ಭಾಗವಾಗಿ ಬೆಳೆಸಿದ ಹಣ್ಣು ತರಕಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದರು. ಶಾಲೆಯ ವಿದ್ಯಾರ್ಥಿಗಳನ್ನು ಬೆಂಗಳೂರಿನ ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ಕಾವೇರಿಯಲ್ಲಿ ಯುವ ನಾಯಕ ರಕ್ಷಿತ್ ಶಿವರಾಂ ಅವರು ಭೇಟಿ ಮಾಡಿಸಿದರು.

ಮಕ್ಕಳು ಕಲಿಕೆಯ ಜೊತೆ ಕೃಷಿಯ ಬಗ್ಗೆ ಸ್ವಲ್ಪಮಟ್ಟಿಗೆ ಜ್ಞಾನ, ಆಸಕ್ತಿ ಬೆಳೆಸಿಕೊಂಡಿರುವುದು ಭಾರತದಂಥ ಕೃಷಿ ಪ್ರಧಾನ ರಾಷ್ಟ್ರದಲ್ಲಿ ಉತ್ತಮ‌ ಅಭ್ಯಾಸ ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳೊಂದಿಗೆ ತನ್ನ ಬಾಲ್ಯವನ್ನೂ ಕೂಡ ಮೆಲುಕು ಹಾಕಿದ ಸಿದ್ದರಾಮಯ್ಯನವರು, ನಾನೂ ಬಾಲ್ಯದಲ್ಲಿ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರಿಂದಲೇ ರಾಜ್ಯದ ರೈತರ ಕಷ್ಟ ಸುಖಗಳನ್ನು ಅರಿಯಲು ಸಾಧ್ಯವಾಗಿದೆ ಎಂದರು.

ಮಕ್ಕಳ ಶ್ರಮವನ್ನು ಶ್ಲಾಘಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಕ್ಕಳ ಕೃಷಿ ಕಾರ್ಯಕ್ಕೆ ಬೆಂಬಲವಾಗಿ ನಿಂತ ಶಾಲೆಗೆ 2 ಕಂಪ್ಯೂಟರ್‌ಗಳನ್ನು ಉಡುಗೊರೆಯಾಗಿ ಕೂಡ ನೀಡಿದರು.

ಮುಖ್ಯಮಂತ್ರಿಗಳ ಭೇಟಿಯ ವೇಳೆ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಯುವ ನಾಯಕ ರಕ್ಷಿತ್ ಶಿವರಾಮ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು,ಶಾಲಾ ಸಿಬ್ಬಂದಿ ವರ್ಗದವರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಟಣ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೆಡಿ, ಉದ್ಯಮಿ ಪ್ರವೀಣ್ ಹಳ್ಳಿ ಮನೆ ಉಪಸ್ಥಿತರಿದ್ದರು.

Exit mobile version