Site icon Suddi Belthangady

ಉದ್ಯೋಗ ಖಾತರಿ ಯೋಜನೆಯಡಿ ಶೌಚಾಲಯ ನಿರ್ಮಿಸಿ ಸಾಧನೆ – ತಾಲೂಕಿನ 30 ಸರ್ಕಾರಿ ಶಾಲೆ, 5 ಕಾಲೇಜುಗಳಲ್ಲಿ ಅನುಷ್ಠಾನ

ಬೆಳ್ತಂಗಡಿ: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೆಳ್ತಂಗಡಿ ತಾಲೂಕಿನಲ್ಲಿ ೩೦ ಸರ್ಕಾರಿ ಶಾಲೆಗಳಲ್ಲಿ ಹಾಗೂ ೫ ಸರ್ಕಾರಿ ಕಾಲೇಜುಗಳಲ್ಲಿ ಶೌಚಾಲಯ ನಿರ್ಮಿಸಿ ಸಾಧನೆ ಮಾಡಲಾಗಿದೆ.

ರಾಜ್ಯ ಸರ್ಕಾರದ ಆದೇಶದಂತೆ ಉದ್ಯೋಗ ಖಾತರಿ ಯೋಜನೆಯ ಅನುದಾನ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅನುದಾನವನ್ನು ಬಳಸಿಕೊಂಡು ಸರ್ಕಾರಿ ಶಾಲೆ, ಕಾಲೇಜಿಗೆ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ತಾಲೂಕಿನ 14 ಶಾಲೆಗಳಲ್ಲಿ ಹಾಗೂ 1 ಕಾಲೇಜಿನಲ್ಲಿ ಕೆಲಸ ಪ್ರಾರಂಭವಾಗಿದೆ.
ಉಳಿದ 16 ಶಾಲೆಗಳು ಹಾಗೂ ೪ ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ. ಒಂದು ಶಾಲೆಯಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ 5.20 ಲಕ್ಷ ರು. ವೆಚ್ಚ ನಿಗದಿಪಡಿಸಲಾಗಿದೆ. ಈ ಪೈಕಿ 1.90 ಲಕ್ಷ ರು. ಉದ್ಯೋಗ ಖಾತರಿ ಯೋಜನೆಯ ಅನುದಾನವಾದರೆ, 3.29 ಲಕ್ಷ ರು. ಅನುದಾನ ಶಿಕ್ಷಣ ಇಲಾಖೆಯಿಂದ ನೀಡಲಾಗುತ್ತದೆ.

ಈಗಾಗಾಲೇ ಶಿಕ್ಷಣ ಇಲಾಖೆಯಿಂದ 82.26 ಲಕ್ಷ ರು. ಅನುದಾನ ಬಿಡುಗಡೆಯಾಗಿದ್ದು ಮನರೇಗಾದಡಿ ಕೂಲಿ ಮತ್ತು ಸಾಮಗ್ರಿ ಮೊತ್ತ ಸೇರಿ 15.18 ಲಕ್ಷ ರು. ಪಾವತಿಸಲಾಗಿದೆ. ಒಂದು ಕಾಲೇಜಿನಲ್ಲಿ ಶೌಚಾಲಯಗಳ ನಿರ್ಮಿಸಲು 5.20 ಲಕ್ಷ ರು. ವೆಚ್ಚ ನಿಗದಿ ಪಡಿಸಲಾಗಿದೆ. ಈ ಪೈಕಿ 1.84 ಲಕ್ಷ ಮನರೇಗಾ ಅನುದಾನವಾದರೆ 3.35 ಲಕ್ಷ ರು. ಅನುದಾನ ಶಿಕ್ಷಣ ಇಲಾಖೆಯಿಂದ ನೀಡಲಾಗುತ್ತಿದೆ. ಈಗಾಗಾಲೇ ಶಿಕ್ಷಣ ಇಲಾಖೆಯಿಂದ 16.79 ಲಕ್ಷ ರೂ ಅನುದಾನ ಬಿಡುಗಡೆಯಾಗಿದ್ದು, ಮನರೇಗಾದಲ್ಲಿ ಕೂಲಿ ಮತ್ತು ಸಾಮಗ್ರಿ ಮೊತ್ತ 3.13 ಲಕ್ಷ ರು. ಪಾವತಿಸಲಾಗಿದೆ.

5 ಪ.ಪೂ. ಕಾಲೇಜುಗಳು-30 ಸ.ಹಿ. ಪ್ರಾ. ಶಾಲೆ: ಕೊಯ್ಯೂರು ಗ್ರಾಮದ ಸ.ಪ.ಪೂ. ಕಾಲೇಜು ಕೊಯ್ಯೂರು, ಕೊಕ್ಕಡ ಗ್ರಾಮದ ಕೊಕ್ಕಡ ಪ.ಪೂ. ಕಾಲೇಜು, ವೇಣೂರು ಗ್ರಾಮದ ಸ.ಪ.ಪೂರ್ವ ಕಾಲೇಜು, ಹತ್ಯಡ್ಕ ಗ್ರಾಮದ ಸ.ಪ.ಪೂ. ಕಾಲೇಜು, ಕಣಿಯೂರು ಗ್ರಾಮದ ಸ.ಪ.ಪೂ. ಕಾಲೇಜು ಪದ್ಮುಂಜ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಾದ ಉಜಿರೆ, ಗಾಂಧಿನಗರ, ಬದನಾಜೆ, ಮಾವಿನಕಟ್ಟೆ ತಿಮ್ಮಣ್ಣಬೆಟ್ಟು ಹೊಕ್ಕಾಡಿಗೋಳಿ, ಪಡ್ಡಂದಡ್ಡ, ಉಂಬೆಟ್ಟು ಸರಳಿಕಟ್ಟೆ, ಮಚ್ಚಿನ, ಕುವೆಟ್ಟು, ಗೋವಿಂದೂರು, ತಣ್ಣೀರುಪಂತ, ಕುಪ್ಪೆಟ್ಟಿ, ಕುಂಜತ್ತೋಡಿ, ತುರ್ಕಳಿಕೆ, ಕೆಮ್ಮಟೆ, ನೇಲ್ಯಡ್ಕ, ಕೊಕ್ಕಡ, ಸೂರ್ಯತ್ತಾವು, ಮೇಲಿನಡ್ಕ, ಮಾಯ, ದೇವನಾರಿ, ಮೂಡಾಯಿಬೆಟ್ಟು, ಮಿತ್ತಬಾಗಿಲು, ನಾವೂರು, ಬಯಲು, ಸರಕಾರಿ ಪ್ರೌಢ ಶಾಲೆಗಳಾದ ಅಳದಂಗಡಿ, ಪುತ್ತಿಲ, ಕರಾಯದಲ್ಲಿ ಶೌಚಾಲಯ ನಿರ್ಮಿಸಲಿದೆ. ೩೦ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಒಟ್ಟು ೧.೪೦ ಕೋಟಿ ರೂ ವೆಚ್ಚವಾಗಲಿದೆ. 5 ಕಾಲೇಜುಗಳಲ್ಲಿ 26 ಲಕ್ಷ ರೂ ವೆಚ್ಚವಾಗಲಿದೆ.

ಆಯ್ದ ಶಾಲೆ, ಪ್ರೌಢಶಾಲೆ, ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣ: ತಾರಾಕೇಸರಿ
ಶಿಕ್ಷಣ ಇಲಾಖೆಯಡಿ ಅನುದಾನ ಸಾಕಷ್ಟು ಇಲ್ಲದಿರುವುದರಿಂದ ಮನರೇಗಾ ಜತೆ ಕೈಜೋಡಿಸಿ ಶೌಚಾಲಯ ನಿರ್ಮಿಸಲು ಮುಂದಾಗಿದೆ. ತಾಲೂಕಿನ ಸರ್ಕಾರಿ ಶಾಲೆಗಳ ಪೈಕಿ ಕೆಲವು ಕಡೆಗಳಲ್ಲಿ ಸಮರ್ಪಕ ಶೌಚಾಲಯಗಳಿರಲಿಲ್ಲ. ಶಿಕ್ಷಣ ಇಲಾಖೆ ಅಂತಹ ಶಾಲೆಗಳನ್ನು ಗುರುತಿಸಿ ಜಿ.ಪಂ.ಗೆ ಮಾಹಿತಿ ನೀಡಿತ್ತು. ಹಾಗಾಗಿ ತಾಲೂಕಿನಲ್ಲಿ ಕಳೆದ ೨ ವರ್ಷಗಳಿಂದ ಶಿಕ್ಷಣ ಇಲಾಖೆ ಮತ್ತು ಮನರೇಗಾ ಯೋಜನೆಯಡಿ ಆಯ್ದ ಶಾಲೆ, ಪ್ರೌಢಶಾಲೆ, ಕಾಲೇಜುಗಳಲ್ಲಿ ಶೌಚಾಲಯಗಳು ನಿರ್ಮಾಣವಾಗುತ್ತಿದೆ. – ತಾರಾ ಕೇಸರಿ, ಕ್ಷೇತ್ರ ಶಿಕ್ಷಣಾಧಿಕಾರಿ ಬೆಳ್ತಂಗಡಿ

ಪ್ರತ್ಯೇಕ ಶೌಚಾಲಯ ನಿರ್ಮಾಣ: ಶಿಕ್ಷಣ ಇಲಾಖೆ ಮತ್ತು ಮನರೇಗಾ ಯೋಜನೆ ಒಗ್ಗೂಡು ವಿಕೆಯಲ್ಲಿ ಅನು ದಾನ ಬಳಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಶಾಲಾ ಶೌಚಾಲಯ, ಪದವಿಪೂರ್ವ ಕಾಲೇಜಿನಲ್ಲಿ ಶೌಚಾಲಯ ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
-ಭವಾನಿ ಶಂಕರ್, ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ.

Exit mobile version