Site icon Suddi Belthangady

ಸೌತಡ್ಕ ನೂತನ ಸಮಿತಿಗೆ ತಡೆ ನೀಡಲು ಪತ್ರ: ಜಿಲ್ಲಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಿದ ಪ್ರಶಾಂತ್ ಪೂವಾಜೆ

ಬೆಳ್ತಂಗಡಿ: ಸೌತಡ್ಕ ಶ್ರೀ ಮಹಾಗಣಪತಿ ದೇಗುಲದಲ್ಲಿ ನಡೆದಿದೆ ಎನ್ನಲಾದ ಗಂಟೆ ಹಗರಣದ ತನಿಖೆಗೆ ಜಿಲ್ಲಾಧಿಕಾರಿ ಮರು ತನಿಖೆಗೆ ಆದೇಶ ಮಾಡಿರುವುದರಿಂದ ಹೊಸ ವ್ಯವಸ್ಥಾಪನಾ ಸಮಿತಿಗೆ ಅಧಿಕಾರ ಹಸ್ತಾಂತರ ಮಾಡುವುದಕ್ಕೆ ತಡೆಯಾಜ್ಞೆ ನೀಡಬೇಕು. ದೇಗುಲದ ಹಿಂದಿನ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಶಾಂತ್ ಪೂವಾಜೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಕ್ಷೇಪಣೆ ಸಲ್ಲಿಸಿದ್ದಾರೆ.

ನೂತನ ವ್ಯವಸ್ಥಾಪನಾ ಸಮಿತಿಯಲ್ಲಿರುವ ಸುಬ್ರಹ್ಮಣ್ಯ ಶಬರಾಯ ಅವರ ಅಧಿಕಾರವಧಿಯಲ್ಲಿ ಹಗರಣ ನಡೆದಿದೆ. ಮತ್ತು ಅಂದಿನ ಕಡತಗಳಿಗೆ ಅವರು ಸಹಿ ಹಾಕಿದ್ದರು. ಅದೇ ರೀತಿ, ಹುಂಡಿ ಹಣವನ್ನು ತಮ್ಮ ಸಾಲ ಕಟ್ಟಲು ಬಳಸಿಕೊಂಡ ಆರೋಪ ಮತ್ತೋರ್ವ ಸದಸ್ಯ ವಿಶ್ವನಾಥ ಪೂಜಾರಿ ಕೊಲ್ಲಾಜೆ ಅವರ ಮೇಲಿದೆ.

ಈ ಬಗ್ಗೆ ತನಿಖೆಗೆ ಆದೇಶ ಮಾಡಿರುವುದರಿಂದ ಅಧಿಕಾರ ಹಸ್ತಾಂತರ ಮಾಡಬಾರದು ಮತ್ತು ಹೊಸ ವ್ಯವಸ್ಥಾಪನಾ ಸಮಿತಿಯ ಕಾರ್ಯಾಚರಣೆಗೆ ತಡೆ ನೀಡಬೇಕು. ಇಲ್ಲವಾದಲ್ಲಿ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗಲಿದೆ ಎಂದು ಪೂವಾಜೆ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗೆ ಸಲ್ಲಿಸಿದ ಈ ಆಕ್ಷೇಪಣೆಯನ್ನು ಬೆಳ್ತಂಗಡಿ ತಹಶೀಲ್ದಾರ್, ದತ್ತಿ ಇಲಾಖೆ ಆಯುಕ್ತರು, ಪುತ್ತೂರಿನ ಸಹಾಯಕ ಆಯುಕ್ತರು ಸೇರಿ ಹಲವರಿಗೂ ತಲುಪಿಸಿದ್ದಾರೆ.

Exit mobile version