Site icon Suddi Belthangady

ಸುಂದರ ಮಲೆಕುಡಿಯ ಅವರ ಕೊಲೆ ಯತ್ನ ಪ್ರಕರಣ: ನ್ಯಾಯಾಲಯದ ತೀರ್ಪು ಸ್ವಾಗತಾರ್ಹ – ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹರ್ಷ

ಬೆಳ್ತಂಗಡಿ: ನೆರಿಯ ಗ್ರಾಮದ ಕಾಟಾಜೆ ಸುಂದರ ಮಲೆಕುಡಿಯ ಅವರ ಕೈ ಕಡಿದು ಕೊಲೆಗೆ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಕೊಟ್ಟಿರುವ ತೀರ್ಪು ಅತ್ಯಂತ ಐತಿಹಾಸಿಕ ಮತ್ತು ಸ್ವಾಗತಾರ್ಹವಾದುದು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಬೆಳ್ತಂಗಡಿ ತಾಲೂಕು ಘಟಕ ಹರ್ಷ ವ್ಯಕ್ತಪಡಿಸಿದೆ.

ಇಡೀ ಈ ಪ್ರಕರಣವನ್ನು ನ್ಯಾಯಾಲಯದ ಕಟಕಟೆಗೆ ತಲುಪಿಸಿ ದಾಳಿಗೊಳಗಾದ ಕುಟುಂಬವನ್ನು ರಕ್ಷಿಸಲು ನಡೆಸಿದ ಪ್ರಯತ್ನಗಳು, ಹೋರಾಟಗಳು ಅತ್ಯಂತ ರೋಮಾಂಚನಕಾರಿ. ಈ ಪ್ರಕರಣವನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಡಿ.ವೈ.ಎಫ್.ಐ, ಸಿ.ಪಿ.ಐ(ಎಂ) ಸೇರಿದಂತೆ ಮಲೆಕುಡಿಯರ ಸಮುದಾಯದ ಸಂಘಟನೆಗಳು ಮತ್ತು ಇತರೆ ಎಲ್ಲಾ ಸಮಾನ ಮನಸ್ಕ ಸಂಘಟನೆಗಳು ನಿರಂತರ ಹೋರಾಟವನ್ನು ನಡೆಸಿದವು.

ಆಸ್ಪತ್ರೆಗೆ ಸಿ.ಪಿ.ಐ(ಎಂ)ನ ಪ್ರಧಾನ ಕಾರ್ಯದರ್ಶಿಯಾಗಿದ್ದ ದಿ.ಕಾ.ಸೀತರಾಮ್ ಯೆಚೂರಿ, ಮುಂದುವರಿದ ಹೋರಾಟದಲ್ಲಿ ತ್ರಿಪುರ ಸಂಸತ್ ಸದಸ್ಯರಾಗಿದ್ದ ಕಾಂ.ಜಿತೇಂದ್ರ ಚೌಧುರಿ ಭಾಗವಹಿಸಿದ್ದರು. ಕಿಸಾನ್ ಸಭಾದ ವಿಜೂಕೃಷ್ಣನ್ ಭೇಟಿ ನೀಡಿದ್ದರು.

ಈ ಪ್ರಕರಣದಲ್ಲಿ ದೃಢವಾಗಿ ನಿಂತು ಅತ್ಯಂತ ಧೈರ್ಯದಿಂದ ಎಲ್ಲಾ ಒತ್ತಡ, ಸಮಸ್ಯೆಗಳನ್ನು ಎದುರಿಸಿ ನಿಂತ ಸುಂದರ ಮಲೆಕುಡಿಯ ಮತ್ತು ಅವರ ಕುಟುಂಬದವರನ್ನು ವಿಜಯವಾಡದಲ್ಲಿ ಜರಗಿದ ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್ ನ ಅಖಿಲ ಭಾರತ ಸಮ್ಮೇಳನದಲ್ಲಿ ಕೇರಳದ ಮುಖ್ಯಮಂತ್ರಿ ಕಾಂ. ಪಿಣರಾಯಿ ವಿಜಯನ್ ರವರು ಅಭಿನಂದಿಸಿದ್ದರು.

ಈ ಪ್ರಕರಣ ತಾರ್ಕಿಕ ಹಂತಕ್ಕೆ ತಲುಪಲು ಶ್ರಮಿಸಿದ ಅಂದಿನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಬಂಟ್ವಾಳ ಎ.ಎಸ್.ಪಿಯಾಗಿದ್ದ ರಾಹುಲ್ ಕುಮಾರ್ ಸೇರಿದಂತೆ ಸುಂದರ ಮಲೆಕುಡಿಯರ ಪರವಾಗಿ ವಾದಿಸಿದ ಸರ್ಕಾರಿ ಅಭಿಯೋಜಕಿ ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತ ಕೂಡ ಅಭಿನಂದನಾರ್ಹರು.

ಇಡೀ ಘಟನೆಗೆ ಕಾರಣವಾಗಿದ್ದ ಜಮೀನು ವಿವಾದ ಇನ್ನೂ ಜೀವಂತವಾಗಿರುವುದು ನಮ್ಮ ವ್ಯವಸ್ಥೆಯ ದುರಂತ. ನೆರಿಯ ಗ್ರಾಮದ ಕಾಟಾಜೆ, ಪರ್ಪಳ ಪ್ರದೇಶದ ಮಲೆಕುಡಿಯ ಸಮುದಾಯದ ಮನೆ, ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡಿರುವ ಜಮೀನಿಗೆ ಸೂಕ್ತ ಹಕ್ಕುಪತ್ರ ನೀಡಲು ರಾಜ್ಯ ಸರ್ಕಾರ ತಕ್ಷಣ ಕಾರ್ಯಪ್ರವೃತವಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ರೀತಿಯ ಹೋರಾಟ ನಡೆಸಬೇಕಾದೀತೆಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಅಧ್ಯಕ್ಷ ವಸಂತ ನಡ, ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಮತ್ತು ಸಂಚಾಲಕ ಶೇಖರ್ ಲಾಯಿಲ ಎಚ್ಚರಿಕೆ ನೀಡಿದ್ದಾರೆ.

Exit mobile version