Site icon Suddi Belthangady

ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ, ಪುಷ್ಪ ರಥೋತ್ಸವ

ಕಲ್ಮಂಜ: ಗ್ರಾಮದ ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರ ಪಜಿರಡ್ಕದಲ್ಲಿ ಫೆ. 4 ರಂದು ರಾತ್ರಿ ಜಾತ್ರೋತ್ಸವದ ಅಂಗವಾಗಿ ಪುಷ್ಪರಥೋತ್ಸವ ಜರಗಿತು. ದಾನಿಗಳು ನೀಡಿದ ನೂತನ ಪುಷ್ಪರಥ ಸಮರ್ಪಣೆ ನಡೆದು 102 ವರ್ಷಗಳ ಬಳಿಕ ದೇವಸ್ಥಾನದಲ್ಲಿ ಜಾತ್ರೆಯ ಸಮಯ ರಥೋತ್ಸವ ಜರಗಿತು.

ಬ್ರಹ್ಮಶ್ರೀ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಅರ್ಚಕ ರಾಜೇಶ್ ಹೊಳ್ಳ ಸಹಕಾರದಲ್ಲಿ ವೇದಮೂರ್ತಿ ವೆಂಕಟರಾಜ ಹೆಬ್ಬಾರ್ ದೇವರ ಬಲಿ, ಉತ್ಸವ, ಪಾಲಕ್ಕಿ ಬಲಿ, ಕಟ್ಟೆ ಪೂಜೆ, ವಸಂತ ಕಟ್ಟೆ ಪೂಜೆ ಮೊದಲಾದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.

15ಕ್ಕಿಂತ ಅಧಿಕ ಭಜನಾ ತಂಡಗಳಿಂದ ದೇವಸ್ಥಾನದ ಹೊರಾಂಗಣದಲ್ಲಿ ಭಜನೆ ಕಾರ್ಯಕ್ರಮ, ಅಷ್ಟ ಸೇವೆ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದೇವದಾಸ್ ಕಾಪಿಕಾಡ್ ತಂಡದವರಿಂದ ತುಳು ನಾಟಕ ಪ್ರದರ್ಶನಗೊಂಡಿತು.

ಸುಮಾರು 8:50 ಲಕ್ಷ ರೂ. ವೆಚ್ಚದ ನೂತನ ಪುಷ್ಪರಥವನ್ನು ದೇವಸ್ಥಾನಕ್ಕೆ ನೀಡಿದ ದಾನಿಗಳಾದ ಸುಕನ್ಯಾ ಮತ್ತು ಜಯರಾಮ್ ರಾವ್ ಹಾಗೂ ಮಕ್ಕಳನ್ನು ಶೋಭಾ ಯಾತ್ರೆ, ಜಾತ್ರೆಯ ಕಾರ್ಯಕ್ರಮಗಳಿಗೆ ಸಹಕರಿಸಿದವರನ್ನು ದೇವಸ್ಥಾನದ ವತಿಯಿಂದ ಅಭಿನಂದಿಸಲಾಯಿತು.

ಆಡಳಿತಾಧಿಕಾರಿ ನಾಗಶಯನ ರಾವ್ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಕೆ. ಮೋಹನ್ ಕುಮಾರ್, ತುಕಾರಾಂ ಸಾಲಿಯಾನ್, ಕೃಷ್ಣಪ್ಪ ಗುಡಿಗಾರ್, ನ್ಯಾಯವಾದಿ ಗಣೇಶ ಗೌಡ, ಬಾಲಚಂದ್ರ ರಾವ್, ವೆಂಕಟರಮಣ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.

ಜಾತ್ರೋತ್ಸವ ಸಮಿತಿ ಅಧ್ಯಕ್ಷ ರವಿಕುಮಾರ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಫೆ. 5ರಂದು ಬೆಳಿಗ್ಗೆ ಗಣಹೋಮ, ದೇವರ ಬಲಿ ಉತ್ಸವ, ದರ್ಶನ ಬಲಿ ಬಟ್ಟಲು ಕಾಣಿಕೆ, ಗಂಧ ಪ್ರಸಾದ ವಿತರಣೆ, ಆಶ್ಲೇಷ ಬಲಿ ಕಲಶಾಭಿಷೇಕ ಮಹಾ ಪೂಜೆ ನಡೆಯಿತು.

Exit mobile version