Site icon Suddi Belthangady

ಕಳಿಯ: ಪಂಚಾಯತ್ ಗ್ರಂಥಾಲಯ ಸಲಹಾ ಸಮಿತಿಯ ಸಭೆ

ಕಳಿಯ: ಫೆ. 3ರಂದು ಗ್ರಾ. ಪಂ. ನ ಗ್ರಂಥಾಲಯ ಸಲಹಾ ಸಮಿತಿಯ ಮೊದಲ ಸಭೆಯು ಗ್ರಾ. ಪಂ. ಅಧ್ಯಕ್ಷ ದಿವಾಕರ ಮೆದಿನ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ಜರಗಿತು.

ಪಂ. ಕಾರ್ಯದರ್ಶಿ ಕುಂಞ ಕೆ. ಸ್ವಾಗತಿಸಿ, ಸಭೆ ಕರೆದ ಉದ್ದೇಶಗಳನ್ನು ತಿಳಿಸಿದರು. ಗ್ರಂಥಾಲಯದ ಮೇಲ್ವಿಚಾರಕಿ ಪ್ರಮೀಳಾ ಪಿ. ಗ್ರಂಥಾಲಯದಲ್ಲಿರುವ ಸೌಲಭ್ಯಗಳು ಮತ್ತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಡೆಯುತ್ತಿರುವ ಸೌಲಭ್ಯಗಳ ಮಾಹಿತಿಯನ್ನು ನೀಡಿದರು.

ಗ್ರಂಥಾಲಯಕ್ಕೆ ಮೇಜುಗಳ ವ್ಯವಸ್ಥೆ, ಪುಸ್ತಕಗಳನ್ನು ಜೋಡಿಸಿ ಇಡಲು ಕವಾಟುಗಳು, ಪ್ರಿಂಟರ್, ಕಂಪ್ಯೂಟರ್ ದುರಸ್ತಿ ಆಗಬೇಕೆಂದು ಸಭೆಯ ಗಮನಕ್ಕೆ ತಂದರು. ಗ್ರಂಥಾಲಯವು ಸಮರ್ಪಕವಾಗಿ ಸೇವೆ ನಿರ್ವಹಿಸಲು ಪ್ರತ್ಯೇಕ ಗ್ರಂಥಾಲಯ ಕೊಠಡಿಯ ಅಗತ್ಯವಿದೆಯೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾ. ಪಂ. ಅಧ್ಯಕ್ಷರು ಮಾತನಾಡಿ ಗ್ರಂಥಾಲಯ ಕೊಠಡಿಯ ನಿರ್ಮಾಣಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಪ್ರತ್ಯೇಕ ಕೊಠಡಿ ನಿರ್ಮಾಣ ಆಗುವವರೆಗೆ ಪಂಚಾಯಿತಿ ವತಿಯಿಂದ ಕೊಠಡಿಯ ವ್ಯವಸ್ಥೆಯನ್ನು ಮಾಡಬೇಕೆಂದು ಸಮಿತಿ ಸದಸ್ಯ ಕೇಶವ ಪೂಜಾರಿ ನಾಳ ಸಲಹೆ ನೀಡಿದರು. ಸಭೆಯಲ್ಲಿ ಸಲಹಾ ಸಮಿತಿಯ ಸದಸ್ಯ ದಿವಾಕರ ಆಚಾರ್ಯ ಗೇರುಕಟ್ಟೆ, ಗೇರುಕಟ್ಟೆ ಸ. ಪ. ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಈಶ್ವರಿ ಕೆ., ಶರತ್ ಕುಮಾರ್, ದೇವಕಿ ಮರ್ತೋಟ್ಟು, ಪ್ರಜ್ಞಾ ಉಪಸ್ಥಿತರಿದ್ದರು. ಪಂಚಾಯತಿ ಸಿಬ್ಬಂದಿ ಸಹಕರಿಸಿದರು. ಪಂಚಾಯತ್ ಕಾರ್ಯದರ್ಶಿಯವರು ವಂದಿಸಿದರು.

Exit mobile version