Site icon Suddi Belthangady

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ವತಿಯಿಂದ ಸ್ವಚ್ಛಾಲಯ ಅಭಿಯಾನ

ಬೆಳ್ತಂಗಡಿ: ನಮ್ಮ ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಬಡ ಮಕ್ಕಳ ಆರೋಗ್ಯ, ನೈರ್ಮಲ್ಯ ಮತ್ತು ಹಕ್ಕು ಸಂರಕ್ಷಣೆಯ ಹಿತದೃಷ್ಟಿಯಿಂದ ದಕ್ಷಿಣಕನ್ನಡ ಜಿಲ್ಲಾ ವ್ಯಾಪ್ತಿಯ ಎಲ್ಲಾ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಶೌಚಾಲಯಗಳನ್ನು ಸ್ವಯಂ ಪ್ರೇರಿತ ಶ್ರಮದಾನದ ಮೂಲಕ ಶುಚಿತ್ವ ಮತ್ತು ದುರಸ್ತಿಗೊಳಿಸಿ ನವೀಕರಿಸಿ ಸ್ವಚ್ಛಾಲಯಗಳನ್ನಾಗಿ ಪರಿವರ್ತಿಸುವ ವಿನೂತನ ಪರಿಕಲ್ಪನೆಯೊಂದಿಗೆ ರಾಜಕೇಸರಿ ಟ್ರಸ್ಟ್ ವತಿಯಿಂದ ಸ್ವಚ್ಚಾಲಯ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ದಕ್ಷಿಣಕನ್ನಡ ಜಿಲ್ಲಾ ವ್ಯಾಪ್ತಿಯ ಸರಿಸುಮಾರು 1000ಕ್ಕೂ ಹೆಚ್ಚಿನ ಎಲ್ಲಾ ಸರಕಾರಿ ಪ್ರಾಥಮಿಕ ಶಾಲೆಗಳ ಶೌಚಾಲಯಗಳನ್ನು “ಸ್ವಚ್ಛಾಲಯ”ಗಳನ್ನಾಗಿ ಪರಿವರ್ತಿಸುವ ಮೂಲಕ ಬಡಮಕ್ಕಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ನೆರವಾಗುವುದು ಈ ಅಭಿಯಾನದ ಸದುದ್ದೇಶ.

ದಸರಾ ರಜಾದಿನಗಳಲ್ಲಿ ಈಗಾಗಲೇ ಹೊಯ್ಗೆಬಜಾರ್, ಸೂಟರ್ ಪೇಟೆ ಮತ್ತು ಕಾವೂರು ಪ್ರಾಥಮಿಕ ಶಾಲೆಗಳಲ್ಲಿ ಶೌಚಾಲಯಗಳನ್ನು ಸ್ವಚ್ಛಾಲಯಗಳನ್ನಾಗಿ ರಾಜಕೇಸರಿ ಸಂಸ್ಥೆಯ ವತಿಯಿಂದ ಪರಿವರ್ತಿಸಲಾಗಿದೆ.
ಈ ಶಾಲೆಗಳಲ್ಲಿ ಅ.21ರಂದು ಪರಿವರ್ತಿತ ಸ್ವಚ್ಛಾಲಯಗಳ ಉದ್ಘಾಟನಾ ಸಮಾರಂಭವನ್ನು ಆಯಾಯ ಶಾಲೆಗಳಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಮೂರೂ ಶಾಲೆಯ ಕಾರ್ಯಕ್ರಮಗಳು ರಾಜಕೇಸರಿ ಸಂಸ್ಥೆಯ ಸಂಸ್ಥಾಪಕಾಧ್ಯಕ್ಷ ದೀಪಕ್ ಜಿ. ಬೆಳ್ತಂಗಡಿ ಅಧ್ಯಕ್ಷತೆಯಲ್ಲಿ ನಡೆಯಿತು. ಮೂರೂ ಶಾಲೆಗಳಲ್ಲಿ ಪುಟಾಣಿ ಮಕ್ಕಳಿಂದಲೇ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

ರಾಜಕೇಸರಿ ಟ್ರಸ್ಟ್ ನ ಜಿಲ್ಲಾಧ್ಯಕ್ಷ ಸಂತೋಷ್ ಕೊಲ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಚ್ಛಾಲಯ ಅಭಿಯಾನದ ಸದುದ್ದೇಶ ಮತ್ತು ಕಾರ್ಯಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಕಾವೂರು ದ.ಕ.ಜಿ.ಪಂ.ಮಾ.ಹಿ. ಪ್ರಾಥಮಿಕ ಶಾಲೆಯ ನವೀಕೃತ ಸ್ವಚ್ಛಾಲಯವನ್ನು ಮಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನೊ ಉದ್ಘಾಟಿಸಿ, ಇಲ್ಲಿಯವರೆಗೆ ಯಾರೂ ಗಮನಹರಿಸದ ಉತ್ತಮ ಕಾರ್ಯಕ್ಕೆ ರಾಜ ಕೇಸರಿ ಟ್ರಸ್ಟ್ ಮುಂದಾಗಿರುವುದು ಶ್ಲಾಘನೀಯ ಮತ್ತು ಅಭಿಯಾನದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಸಂತಸ ವ್ಯಕ್ತ ಪಡಿಸಿದರು.

ಹೊಯ್ಗೆಬಜಾರ್ ಜ್ಞಾನೋದಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಜಯರಾಜ್ ಪ್ರಕಾಶ್ ಅಭಿಯಾನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಇಂತಹ ಸಮಾಜಮುಖಿ ಅಭಿಯಾನಗಳು ಇತರರಿಗೂ ಪ್ರೇರಣೆಯಾಗಲಿ ಎಂದು ಹಾರೈಸಿ ಈ ಸತ್ಕಾರ್ಯದಲ್ಲಿ ನಾವೂ ರಾಜ ಕೇಸರಿಯೊಂದಿಗೆ ಕೈ ಜೋಡಿಸುವುದಾಗಿ ತಿಳಿಸಿದರು. ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಸರಕಾರಿ ಶಾಲೆಗಳ ಉಳಿವಿಗಾಗಿ ನಾವೆಲ್ಲರೂ ಶ್ರಮಿಸಬೇಕು ಮತ್ತು ಶಾಲೆಗಳಲ್ಲಿ ಉತ್ತಮ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಇಂತಹ ಸಮಾಜಮುಖಿ ಚಿಂತನೆಯ ಅಭಿಯಾನಗಳು ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಲಿದೆ ಎಂದರು.

ಸೂಟರ್ ಪೇಟೆಯ ದ.ಕ.ಜಿ.ಪಂ.ಕಿ. ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪಲ್ಲವಿ ಮತ್ತು ಅನಿತರವರು ಬಡ ಮಕ್ಕಳ ಆರೋಗ್ಯದ ಹಿತದಷ್ಟಿಯಿಂದ ಶೌಚಾಲಯಗಳ ಶುಚಿತ್ವ ಮತ್ತು ದುರಸ್ತಿ ಕಡೆಗೆ ಗಮನ ಹರಿಸಿ ಯೋಜನೆ ರೂಪಿಸಿದ್ದು ಸಂಸ್ಥೆಯ ನಿಸ್ವಾರ್ಥ ಸೇವಾ ಮನೋಭಾವನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಣ್ಣಿಸಿದರು.

ಸ್ವಚ್ಚತಾ ಶ್ರಮದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಶ್ರಮವಹಿಸಿದ ಸಂಸ್ಥೆಯ ಉಪಾಧ್ಯಕ್ಷ ಲಕ್ಷ್ಮಣ್ ಕೋಟ್ಯಾನ್ ಹಾಗೂ ಸುಜಾತ ಕೋಟ್ಯಾನ್ ದಂಪತಿಗಳನ್ನು ಮತ್ತು ಜೊತೆ ಕಾರ್ಯದರ್ಶಿ ಶ್ರೀನಿವಾಸ್ ಕುಲಾಲ್ ರವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಮೂರೂ ಶಾಲೆಗಳ ಮುಖ್ಯೋಪಾಧ್ಯಾಯಿನಿಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಸ್ವಚ್ಚತಾ ಶ್ರಮದಾನದಲ್ಲಿ ಪಾಲ್ಗೊಂಡ ಶ್ರಮಜೀವಿ ಸ್ವಯಂ ಸೇವಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ರಾಜ ಕೇಸರಿ ಟ್ರಸ್ಟ್ ನ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಾಲೆಯ ಹಳೇ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಕ ಪೋಷಕರ ಸಂಘದ ಪದಾಧಿಕಾರಿಗಳು, ಸದಸ್ಯರು, ಶಿಕ್ಷಕ ವೃಂದ ಮತ್ತು ಶಾಲೆಯ ಮಕ್ಕಳು ಉಪಸ್ಥಿತರಿದ್ದರು. ಮಧುರ ಪೂಜಾರಿ ವಾಮಂಜೂರು ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version